ಕಲಬುರಗಿ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಹೆಸರುಕಾಳು ಹಾಗೂ ಉದ್ದು ಖರೀದಿಗೆ ಅನುಕೂಲವಾಗಲು ಖರೀದಿ ಕೇಂದ್ರ ಸ್ಥಾಪನೆಗೆ ಆದೇಶಿಸಿದೆ. ಆದರೆ ಸರ್ಕಾರದ ಈ ಕ್ರಮ ತುಂಬಾ ವಿಳಂಬವಾಗಿದ್ದು, ಕಾಟಾಚಾರದಿಂದ ಕೂಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಹೆಸರು ಕಾಳು ಹಾಗೂ ಉದ್ದು ರಾಶಿ ಮಾಡಿದ ಬಹುತೇಕ ರೈತರು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಹಿಂದೆ ಒಂದೂವರೆ ತಿಂಗಳಲ್ಲಿ ಮೂರು ಬಾರಿ ಪತ್ರ ಬರೆದು ಸರ್ಕಾರಕ್ಕೆ ಮನವಿ ಮಾಡಿ ತುರ್ತಾಗಿ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ನೆರವಾಗುವಂತೆ ಕೇಳಿಕೊಂಡಿದ್ದರೂ ನಿರ್ಲಕ್ಷ್ಯ ಮುಂದುವರೆಸಿದ್ದಾರೆ. ಈಗ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿ ಖರೀದಿ ಕೇಂದ್ರ ಸ್ಥಾಪಿಸಲು ಆದೇಶ ಹೊರಡಿಸಿರುವುದನ್ನು ನೋಡಿದರೆ ಇದೊಂದು ಕಾಟಾಚಾರದ ನಿರ್ಧಾರ ಎಂದು ತೋರುತ್ತದೆ ಎಂದು ಟೀಕಿಸಿದ್ದಾರೆ.
ಸರ್ಕಾರದ ನಿರ್ಧಾರದ ಪ್ರಕಾರ ಜಿಲ್ಲೆಯಲ್ಲಿ 64 ಖರೀದಿ ಕೇಂದ್ರ ಸ್ಥಾಪಿಸಿ, ಹೆಸರು ಕಾಳನ್ನು ಪ್ರತೀ ಕ್ವಿಂಟಾಲ್ಗೆ 7,196 ರೂ. ಹಾಗೂ ಉದ್ದು 6,000 ರೂ. ನಿಗದಿ ಮಾಡಲಾಗಿದೆ. ರೈತರು ತಮ್ಮ ಹೆಸರು ನೋಂದಾಯಿಸಲು 15-10-2020 ಕೊನೆಯ ದಿನ ಹಾಗೂ ಧಾನ್ಯಗಳನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು 15-11-2020 ಕೊನೆಯ ದಿನವಾಗಿದೆ.
ಬಹುತೇಕ ರೈತರು ಹಿಂಗಾರು ಬೆಳೆಯ ಬಿತ್ತನೆಗೆ ಭೂಮಿ ಹದ ಮಾಡುವುದು ಸೇರಿದಂತೆ ಬೀಜ-ಗೊಬ್ಬರ ಖರೀದಿಗೆ ಹಣದ ಕೊರತೆ ನೀಗಿಸಲು ಕಡಿಮೆ ಬೆಲೆಯಲ್ಲಿ ಹೆಸರು ಮಾರಾಟ ಮಾಡಿದ್ದಾರೆ. ಇದೀಗ ಖರೀದಿ ಕೇಂದ್ರದಲ್ಲಿ ರೈತರು ತಮ್ಮ ಹೆಸರು ನೋಂದಣಿ ಮಾಡಲು ಅಕ್ಟೋಬರ್ 15ರಂದು ಕೊನೆ ದಿನ ನಿಗದಿಪಡಿಸಲಾಗಿದೆ. ಆದರೆ ಖರೀದಿ ಕೇಂದ್ರ ಸ್ಥಾಪನೆಗೆ ಕನಿಷ್ಠ ಎರಡು ವಾರ ಬೇಕಾಗಬಹುದು. ಹಾಗಾಗಿ ಸರ್ಕಾರ ಕೇವಲ ರೈತರ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಸರಿಯಾದ ಸಮಯದಲ್ಲಿ ಧಾನ್ಯಗಳನ್ನು ಖರೀದಿ ಕೇಂದ್ರಗಳಿಗೆ ಸಾಗಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಪರ ಕೇವಲ ಕಾಟಾಚಾರದ ಕಾಳಜಿ ತೋರಿಸುತ್ತಿದ್ದು, ರೈತ ವಿರೋಧಿ ಬಿಲ್ ಪಾಸ್ ಮಾಡುವ ಉದ್ದೇಶ ಹೊಂದಿವೆ ಎಂದು ದೂರಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರ ಈ ಕೂಡಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಧಾನ್ಯಗಳನ್ನು ಖರೀದಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.