ಹಾಸನ: ಅಂಗನವಾಡಿ ಶಿಕ್ಷಕಿಯೇ ಸುಮಾರು ಹತ್ತು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘದವರು ಪ್ರತಿಭಟನೆ ನಡೆಸಿದರು.
ನಾರಾಯಣಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಮನೆಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾದ ಪದ್ಮ, ಸುಮಾರು ಹತ್ತು ವರ್ಷಗಳಿಂದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಕೇಳಲು ಹೋದ ನಮಗೆ ಆ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮಗೆ ರಾಜಕಾರಣಿಗಳ ಬೆಂಬಲವಿದೆ ಎನ್ನುತ್ತಾರೆ. ಈ ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ತ್ರೀ ಶಕ್ತಿ ಸಂಘದವರು ಹಾಗೂ ಸ್ವ-ಸಹಾಯ ಸಂಘದವರು ಸೇರಿ ಪ್ರತಿಭಟನೆ ನೆಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಶಿಕ್ಷಕಿಯಾಗಿ ಮಕ್ಕಳಿಗೆ ನೀತಿ ಹೇಳುವ ಇವರೇ ಅಕ್ರಮ ಮದ್ಯ ಮರಾಟದಲ್ಲಿ ತೊಡಗಿರುವುದು ನಿಜಕ್ಕೂ ನಾಚಿಕೆಗೇಡು. ಅಲ್ಲದೆ ಅಂಗನವಾಡಿಗೆ ಬರುವ ಮಕ್ಕಳಿಗೆ ನೀಡುವ ಆಹಾರದಲ್ಲೂ ಸಹ ಮೋಸ ಮಾಡುವ ಇವರು, ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಪೌಷ್ಟಿಕ ಆಹಾರವನ್ನು ತಮ್ಮ ಮನೆಗಳಿಗೆ ಕದ್ದು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಕೇಳಲು ಬಂದ ಗ್ರಾಮಸ್ಥರ ಮೇಲೆ ಅವರ ಪತಿ ಮಂಜೇಗೌಡ, ಮಗ ರಘು ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.