ಹಾಸನ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಎರಡು ಸಾವಿರಕ್ಕೂ ಅಧಿಕ ರಸಗೊಬ್ಬರದ ಚೀಲಗಳನ್ನ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಮಂಜುನಾಥ್ ಟ್ರಾವೆಲ್ಸ್ ಹಾಗೂ ಹೆಚ್ಟಿಎ ಗ್ರೂಪ್ನ ಮಾಲೀಕರಿಗೆ ಸೇರಿದ ಗೋದಾಮಿನಲ್ಲಿ ರೈತರಿಗೆ ನೀಡುವ ಸಬ್ಸಿಡಿ ರಸಗೊಬ್ಬರದ ಸಾವಿರಾರು ಚೀಲಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಗಿರೀಶ್ ಗೌಡ ಮತ್ತು ಜಿಲ್ಲಾಧ್ಯಕ್ಷ ಸುರೇಶ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಹಾಸನ ಪೊಲೀಸರು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ನೇತೃತ್ವದ ತಂಡ ದಾಳಿ ನಡೆಸಿದಾಗ ರಸಗೊಬ್ಬರದ ಚೀಲಗಳು ಪತ್ತೆಯಾಗಿವೆ.
ಹೆಚ್.ಟಿ.ಎ ಗ್ರೂಪ್ ಗೋದಾಮಿನಲ್ಲಿ ಸಂಗ್ರಹಿಸಿರುವ ರಸಗೊಬ್ಬರವನ್ನ ಗಮ್ ತಯಾರಿಕೆಗಾಗಿ ಖರೀದಿಸಲಾಗಿದೆ ಎಂದು ಹೇಳಲಾಗ್ತಿದೆ. ಸದ್ಯ ಗೊಬ್ಬರದ ಚೀಲಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಗೋದಾಮಿಗೆ ಬೀಗ ಜಡಿದಿದ್ದಾರೆ.