ಹಾಸನ: ಡಿಕೆಶಿ ತನ್ನ ಒಕ್ಕಲಿಗ ಸಮಾಜದ ಒಳಗಿನ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ನಂತರ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲಿ ಎಂದು ಗೃಹ ಸಚಿವ ಎಂಬಿ ಪಾಟೀಲ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ಗೆ ತಿರುಗೇಟು ನೀಡಿದರು.
ಅರಸೀಕೆರೆಯ ಕಾಂಗ್ರೆಸ್ ಮುಖಂಡ ಶಿವಶಂಕರ್ಸ್ವಾಮಿ ಮನೆಗೆ ಭೇಟಿ ನೀಡಿದ ಎಂಬಿ ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡುವ ಇರಾದೆಯನ್ನು ಹೊಂದಿದ್ದು ಈ ಬಾರಿ ಅವರ ಪರವಾದ ವಾತಾವರಣ ಕಂಡುಬರುತ್ತಿದ್ದು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಅಂತ ಹೇಳಿದರು.
ಇನ್ನು ಹಳೆ ಮೈಸೂರು ಭಾಗದಲ್ಲಿ 20 ಲಕ್ಷಕ್ಕೂ ಅಧಿಕ ಲಿಂಗಾಯತ ಮತದಾರರಿದ್ದು ಇವರಿಗೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ ಹೀಗಾಗಿ ಹೇಗೆ ಮೈತ್ರಿಕೂಟವನ್ನು ಬೆಂಬಲಿಸುತ್ತಾರೆ ಎಂಬ ಪ್ರಶ್ನೆಗೆ ಮಾತನಾಡಿದ ಅವರು ಹಿಂದೆ ಮಹದೇವ ಪ್ರಸಾದ್ ಅವರು ಬಳಿಕ ಗೀತಾ ಮಹದೇವಪ್ರಸಾದ್ ಬಂದರು. ಹಾಗಾಗಿ ಅಲ್ಲಿ ಸಮಸ್ಯೆ ಉದ್ಭವ ಆಗೋದು. ಜೊತೆಗೆ ಈ ಭಾಗದಲ್ಲಿ ಲಿಂಗಾಯಿತ ಧರ್ಮಕ್ಕೆ ಯಾವುದೇ ನಿಗಮ ಮಂಡಳಿ ಸ್ಥಾನವನ್ನು ಕೂಡ ನೀಡದಿರುವುದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ನಾನು ವರಿಷ್ಠರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈ ವಿಚಾರ ಎಲ್ಲಿ ಮುಟ್ಟಬೇಕು ಯಾರಿಗೆ ತಲುಪಿಸಬೇಕು ಅವರಿಗೆ ತಲುಪಿಸುತ್ತೇನೆ ಎಂದ್ರು.