ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಯಲಿವಾಳದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಮೇಲೆ ಚನ್ನಪ್ಪ ಡಫಳಿ ಹೊರಿಸಿರುವ ಆರೋಪಗಳು ಶುದ್ಧ ಸುಳ್ಳು. ಹಂತ ಹಂತವಾಗಿ ಖಾಲಿ ಚೀಲ, ಬಾಡಿಗೆ ಹಣವನ್ನು ರೈತರಿಗೆ ಒದಗಿಸಲಾಗುತ್ತಿದೆ ಎಂದು ಸೊಸೈಟಿ ಸೆಕ್ರೆಟರಿ ಸಹದೇವಪ್ಪ ಹೊಸಕಟ್ಟಿ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಿವಾಳದ ಪಿಕೆಪಿಎಸ್ ಸೊಸೈಟಿ ಹಲವಾರು ವರ್ಷಗಳಿಂದ ರೈತರ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, 2017-18ನೇ ಸಾಲಿನಲ್ಲಿ ಸೊಸೈಟಿ ವತಿಯಿಂದ ರೈತರ ಶೇಂಗಾ ಖರೀದಿ ಮಾಡಿ ನಾಫೆಡ್ಗೆ ಕಳಿಸಿಕೊಡಲಾಗಿತ್ತು. ಆದರೆ ರೈತ ಚನ್ನಪ್ಪ ಡಫಳಿ ತನ್ನ ಸ್ವಾರ್ಥಕ್ಕಾಗಿ ಸಂಘದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಸಂಘವು 2017-18ರಲ್ಲಿ ಒಟ್ಟು 30647 ಚೀಲ ಶೇಂಗಾ ಖರೀದಿ ಮಾಡಿದ್ದು, ಚನ್ನಪ್ಪ ಡಫಳಿ ಅವರು 30603 ಚೀಲ ಖರೀದಿ ಮಾಡಿದ್ದಾರೆ. ಕಳೆದ 10 ತಿಂಗಳಿಂದ ಹಣಕಾಸು ಬಿಡುಗಡೆ ಮಾಡಿಲ್ಲ, ಠರಾವು ನಕಲು ಕೊಟ್ಟಿಲ್ಲ. ಅಧಿಕಾರಿಗಳಿಗೆ ಲಕ್ಷಗಟ್ಟಲೆ ಲಂಚ ಕೊಟ್ಟಿದ್ದಾರೆ. ಖಾಲಿ ವೋಚರ್ ಮೇಲೆ ಸಹಿ ತೆಗೆದುಕೊಂಡು ಸೊಸೈಟಿಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದ್ದು ಶುದ್ಧ ಸುಳ್ಳು. ಸೊಸೈಟಿಯು ರೈತರ ಖಾಲಿ ಚೀಲಗಳ ಹಣವನ್ನು 4 ತಿಂಗಳು 14 ದಿನಗಳ ಹಿಂದೆಯೇ ಕೊಟ್ಟಿದೆ. ಅಲ್ಲದೇ ಬ್ಯಾಂಕ್ ಪಾಸ್ಬುಕ್ನಲ್ಲಿ ಇದು ದಾಖಲಾಗಿದೆ. ಅವರು ಸಂಘಕ್ಕೆ ಠರಾವಿನ ನಕಲು ಪ್ರತಿ ಕೇಳಲು ಬಂದಿರುವುದೇ ಇಲ್ಲ. ನಾಫೆಡ್ ನಿಯಮದ ಪ್ರಕಾರ ಒಬ್ಬ ರೈತ 42 ಚೀಲಗಳನ್ನು ಮಾತ್ರ ಕಳುಹಿಸಲು ಸಾಧ್ಯ. ಅಲ್ಲದೇ ಯಾವುದೇ ಖಾಲಿ ವೋಚರ್ನಲ್ಲಿ ಸಹಿ ತೆಗೆದುಕೊಂಡಿಲ್ಲ. ಇದು ಸೊಸೈಟಿ ಹೆಸರು ಕೆಡಿಸಲು ಮಾಡಿರುವ ಆರೋಪವಾಗಿದೆ ಎಂದರು.