ಧಾರವಾಡ: ಸರ್ಕಾರ ತೋಟಗಾರಿಕೆ ಬೆಳೆಗಳನ್ನು ಬೆಂಬಲಿಸಬೇಕು. ತೋಟಗಾರಿಕೆ ಹಾಗೂ ಹೈನುಗಾರಿಕೆ ರೈತನ ಬೆನ್ನೆಲುಬು. ಇದಕ್ಕೆ ಸಂಬಂಧಿಸಿದ ಮಂತ್ರಿಗಳು, ಕಾರ್ಯದರ್ಶಿಗಳು ಹೆಚ್ಚು ಗಮನ ಹರಿಸಬೇಕು. ಆದರೆ ಮಂತ್ರಿಗಳು ಆ ಕೆಲಸ ಮಾಡುವುದಿಲ್ಲ ಎಂದು ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ, ನಮಗೆ ಅನ್ನ ಹಾಕುವವರ ಬಗ್ಗೆ ಚಿಂತನೆ ಬೇಕು. ಆದರೆ ರಾಜಕಾರಣವೇ ಹೆಚ್ಚಾಗಿದೆ. ಸರ್ಕಾರ, ಅಧಿಕಾರಿಗಳು ಈ ಬಗ್ಗೆ ತಿಳಿವಳಿಕೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಯಾರೂ ಬರಲ್ಲ, ಕೆಲವು ಸಚಿವರುಗಳು ಇಲ್ಲಿ ಬಂದು ನೋಡೇ ಇಲ್ಲ.
ಬೆಂಗಳೂರು ಬಿಟ್ಟು ಹೊರ ಬರುವ ಪದ್ಧತಿ ಈಗಿನ ಸಚಿವರಲ್ಲಿಲ್ಲ. ಈಗಿನ ಕೆಲವು ಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತ. ಅವರು ಕ್ಷೇತ್ರದ ಮಂತ್ರಿ, ರಾಜ್ಯದ ಮಂತ್ರಿ ಅಲ್ಲ ಅಂದುಕೊಂಡಿದ್ದಾರೆ. ಇವತ್ತಿನ ರಾಜಕಾರಣ ಕಲುಷಿತ ವಾತಾವರಣದಲ್ಲಿ ಕೂಡಿದಾಗ್ಯೂ ಕೆಲ ಮಂತ್ರಿಗಳಾದ್ರೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಾಳೆ ನಾನು ಸಿಎಂ ಅವರನ್ನು ಭೇಟಿಯಾಗುತ್ತಿದ್ದು, ಈ ಸಮಸ್ಯೆಯನ್ನು ಹೇಳುತ್ತೇನೆ. ಎಲ್ಲ ಸಚಿವರು ತಮ್ಮ ಕ್ಷೇತ್ರದ ಜೊತೆಗೆ ಇತರೆ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಓಡಾಡಲು ಹೇಳಲು ಹೇಳುತ್ತೇನೆ. ಮಳೆಯಿಂದ ಹಲವು ಬೆಳೆ ನಾಶವಾಗಿದೆ. ಸಿಎಂ, ಡಿಸಿ ಹಾಗೂ ಸಿಇಒ ಸಭೆ ಮಾಡಿದ್ದಾರೆ. ಅಧಿಕಾರಿಗಳು ಸೆಕ್ರೆಟರಿಗಳು ಕೆಲಸ ಮಾಡಬೇಕು. ಅವರೇ ಬೆಂಗಳೂರು ಬಿಡಲ್ಲ, ಕೃಷಿ ಹಾಗೂ ತೋಟಗಾರಿಕೆಯ ಅಧಿಕಾರಿಗಳು ಇವತ್ತಿನ ಕಾರ್ಯಕ್ರಮಕ್ಕೂ ಹಾಜರಾಗಿಲ್ಲ. ನೌಕರಿ ಮಾಡಿ ಸಂಬಳ ತೆಗೆದುಕೊಳ್ಳುವುದಷ್ಟೇ ಅವರ ಕೆಲಸವಾಗಿದೆ ಎಂದರು.
ಇದನ್ನೂ ಓದಿ: ದಸರಾ ರಜೆ 15 ದಿನಕ್ಕೆ ಸೀಮಿತಗೊಳಿಸಿದ್ದು ಸರಿಯಲ್ಲ, ಸದ್ಯಕ್ಕೆ ಶಾಲೆ ತೆರೆಯಬೇಡಿ: ಹೊರಟ್ಟಿ ಪತ್ರ