ದಾವಣಗೆರೆ: ಹೊನ್ನಾಳಿ ತಾಲೂಕಿನ ಯರೇಚಿಕ್ಕನಹಳ್ಳಿ ಗ್ರಾಮಸ್ಥರು ಹುಚ್ಚು ಮಂಗನ (ಮುಷ್ಯಾ) ಕಾಟಕ್ಕೆ ಬೇಸತ್ತು ಹೋಗಿದ್ದಾರೆ.
ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಎಲ್ಲಿ ದಾಳಿ ಮಾಡಿ ಬಿಡುತ್ತೋ ಎಂಬ ಆತಂಕ ಕಾಡುತ್ತಿದೆ. ಆಚೆ ಮಕ್ಕಳು, ಮಹಿಳೆಯರು ಓಡಾಡೋ ಹಾಗಿಲ್ಲ. ಗ್ರಾಮಕ್ಕೆ ಮಂಗ ಎಂಟ್ರಿ ಕೊಟ್ಟಾಗ ಗ್ರಾಮದ ಜನ ಮನೆ ಬಾಗಿಲು ಹಾಕಿಕೊಳ್ತಾರೆ. ಅಷ್ಟು ಭಯಾನಕವಾಗಿ ದಾಳಿ ಮಾಡ್ತಿದೆ. ಈವರೆಗೆ 11 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಕಳೆದ 3 ತಿಂಗಳಿಂದ ಮಂಗನ ಹಾವಳಿ ಜಾಸ್ತಿ ಆಗಿದ್ದು, ರೈತರು ಜಮೀನಿಗೆ ಹೋಗುವ ಹಾಗಿಲ್ಲ. ಮಕ್ಕಳು ಮನೆಯಿಂದ ಹೊರ ಬರುವಂತಿಲ್ಲ. ಸುಖಾಸುಮ್ಮನೆ ದಾರಿಯಲ್ಲಿ ಹೋಗುವವರ ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿದೆ. ಇದರಿಂದ ಯರೇಚಿಕ್ಕನಹಳ್ಳಿ ಗ್ರಾಮದ ಜನತೆಗೆ ನೆಮ್ಮದಿ ಇಲ್ಲದಂತಾಗಿದೆ. ಜನ ಆಚೆ ಬರಬೇಕಾದರೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಇನ್ನು ಈ ಮಂಗನನ್ನು ಸೆರೆ ಹಿಡಿಯಲು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ನಾವು ಕೆಂಪು ಮೂತಿ ಮಂಗಗಳಿದ್ದರೆ ಸೆರೆ ಹಿಡಿಯುತ್ತೇವೆ. ಆದ್ರೆ ಮುಷ್ಯಾನ ಹಿಡಿಯಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಗ್ರಾಮದ ಜನ ಮುಷ್ಯಾನ ಹಿಡಿಯುವವರು ಯಾರಿದ್ದಾರೆ. ಸ್ವಲ್ಪ ತಿಳಿಸಿಕೊಡಿ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.