ಮಂಗಳೂರು: ಹೃದ್ರೋಗಿ ಪತಿಯನ್ನು ಉಳಿಸಲು ಪತ್ನಿಯು ಕಣ್ಣೀರು ಹಾಕುತ್ತಾ ತನ್ನ ನೋವನ್ನು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೇವಲ ಅರ್ಧ ದಿನದಲ್ಲಿ ಬರೋಬ್ಬರಿ 14 ಲಕ್ಷ ರೂ. ದಾನಿಗಳ ನೆರವಿನಿಂದ ಕೂಡಿ ಬಂದಿತ್ತು. ಆದರೆ ಅಲ್ಲಿ ವಿಧಿಯ ಹಣೆ ಬರಹ ಬೇರೆಯೇ ಇತ್ತು.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ರಂಜೇಶ್ ಶೆಟ್ಟಿ ಹೃದ್ರೋಗಿಯಾಗಿದ್ದು, ಇವರ ಚಿಕಿತ್ಸೆಗಾಗಿ ಸುಮಾರು 10 ಲಕ್ಷ ರೂ. ಬೇಕಾಗಿತ್ತು. ಆದರೆ ಹಣವಿಲ್ಲದ ಸಂದರ್ಭದಲ್ಲಿ ಕುಟುಂಬಸ್ಥರು ಸಹಾಯ ಮಾಡಿದ್ದರು. ಇನ್ನು ರಂಜೇಶ್ಗೆ ಹೃದಯ ಕಾಯಿಲೆಯೊಂದಿಗೆ ಕಿಡ್ನಿ ವೈಫಲ್ಯವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನ್ನ ಚಿನ್ನಾಭರಣಗಳನ್ನು ಮಾರಿ 50 ಸಾವಿರ ರೂ. ಪಡೆದು ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನಷ್ಟು ವೆಚ್ಚ ಭರಿಸಲು ಹಣವಿಲ್ಲದೆ ಮೆಡಿಕಲ್ ಶಾಪ್ನ ಕಬೀರ್ ಎಂಬುವರಲ್ಲಿ ದುಃಖ ತೋಡಿಕೊಂಡಿದ್ದರು. ತಕ್ಷಣ ಅವರು ಸಾಮಾಜಿಕ ಕಾರ್ಯಕರ್ತ ಮುಲ್ಕಿಯ ಆಸೀಫ್ ಎಂಬುವರಿಗೆ ವಿಷಯ ತಿಳಿಸಿದರು.
ಅವರು ತಕ್ಷಣ ಆಸ್ಪತ್ರೆಗೆ ಧಾವಿಸಿ, ದಾನಿಗಳ ನೆರವಿಗಾಗಿ ಗೀತಾ ಅವರಿಂದ ಸಂಕಷ್ಟವನ್ನು ವಿವರಿಸುವ ವಿಡಿಯೋವೊಂದನ್ನು ಮಾಡಿಸಿದ್ದರು. ಇನ್ನು ವಿಡಿಯೋ ಮಾಡಿದ ಬಳಿಕ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ದಾನಿಗಳ ನೆರವಿನಿಂದ ಬರೋಬ್ಬರಿ 14 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿ ಜಮೆಯಾಗಿತ್ತು. 14 ಲಕ್ಷ ರೂ. ಜಮೆಯಾದ ಬಳಿಕ ಬುಧವಾರದಂದು ಆಸೀಫ್ ಅವರು ಮತ್ತೊಂದು ವಿಡಿಯೋ ಮಾಡಿ ಹಣ ಕೈಗೂಡಿದೆ. ಮತ್ತೆ ಹಣದ ನೆರವು ಬೇಡ ಎಂದು ಹೇಳಿದ್ದರು.
ಆದರೆ ವಿಧಿಯ ಆಟ ಮಾತ್ರ ಬೇರೆಯೇ ಆಗಿತ್ತು. ರಂಜೇಶ್ಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪತಿಯನ್ನು ಉಳಿಸುವ ಪತ್ನಿ ಗೀತಾರ ಪ್ರಯತ್ನ ಸಫಲವಾಗಲಿಲ್ಲ.