ಮಂಗಳೂರು: ಗೋಲ್ಡ್ ಬಿಸ್ಕತ್ ವಿಚಾರದಲ್ಲಿ ಇಬ್ಬರು ಸಹೋದರರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪದಡಿ ಐದು ಮಂದಿ ಖದೀಮರನ್ನು ಬಂಧಿಸುವಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅರ್ಕುಳ ಗ್ರಾಮದ ರೈಲ್ವೆ ಹಳಿ ಬಳಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ರೈಲ್ವೆ ಹಳಿ ಬಳಿ ಕೆಲವರು ಮಾತನಾಡುತ್ತಿದ್ದದ್ದನ್ನು ಕಂಡು ವಿಚಾರಿಸಲು ಹೋಗಿದ್ದಾರೆ. ಖದೀಮರು ಪೊಲೀಸರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಿ, ಓಡಿ ಹೋಗಿದ್ದಾರೆ. ಆಗ ಗ್ರಾಮಾಂತರ ಪೊಲೀಸರು ಸಿಸಿಟಿವಿ, ವಾಹನ ಸಂಖ್ಯೆಯನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಿದ್ದ ವೇಳೆ ಶಾರೂಕ್ ನನ್ನು ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು : ಅಪಹರಣದ ಆರೋಪದಡಿ ಉಪ್ಪಿನಂಗಡಿಯ ಕರ್ವೇಲ್ ಸಿದ್ದಿಕ್ (39) ಬಂಟ್ವಾಳದ ಕಲಂದರ್ ಸಾಫಿ ಗಡಿಯಾರ(22), ಬೆಳ್ತಂಗಡಿಯ ಮುಹಮ್ಮದ್ ಇರ್ಷಾದ್ (28), ಬಂಟ್ವಾಳದ ಇರ್ಫಾನ್ (38), ಮಂಗಳೂರಿನ ಮೊಹಮ್ಮದ್ ರಿಯಾಜ್ (33) ಬಂಧಿತರು.
ಸಹೋದರರ ಅಪಹರಣ ಪ್ರಕರಣ :ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಂಗಳೂರಿನಲ್ಲಿ ಮಾತನಾಡಿ, ಆರೋಪಿಗಳು ಕಡಬ ತಾಲೂಕಿನ ಕೊಯಿಲ ಗ್ರಾಮದ ಶಾರೂಕ್ ಹಾಗೂ ಆತನ ಸಹೋದರ ನಿಜಾಮುದ್ದೀನ್ನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಶಾರೂಕ್ ನ ಕಿಸೆಯಲ್ಲಿದ್ದ 22,500 ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದಾರೆ. ನಿಜಾಮುದ್ದೀನ್ ಬಳಿಯಲ್ಲಿದ್ದ ಮೊಬೈಲ್ ದರೋಡೆ ಮಾಡಿ ಆತನಿಗೆ ಥಳಿಸಿ 4 ಲಕ್ಷ ರೂ ತಂದುಕೊಡುವ ವರೆಗೂ ನಿನ್ನ ಸಹೋದರ ಶಾರೂಕ್ನನ್ನು ಬಿಡುವುದಿಲ್ಲ ಎಂದು ಹೇಳಿ ಆತನನ್ನು ಕಳುಹಿಸಿದ್ದಾರೆ. ನಿಜಾಮುದ್ದೀನ್ ಮನೆಗೆ ಬಂದಾಗ ತೀವ್ರ ಅಸ್ವಸ್ಥಗೊಂಡಿದ್ದರಿಂದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅರ್ಕುಳ ಗ್ರಾಮದ ರೈಲ್ವೆ ಹಳಿಯ ಬಳಿ ಆಲ್ಟೋ ಕಾರಿನಲ್ಲಿದ್ದವರನ್ನು ಬೀಟ್ ಪೊಲೀಸರು ವಿಚಾರಿಸಿದ್ದಾರೆ.ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ಶಾರೂಕ್ ನನ್ನು ಅಪಹರಣ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಗೋಲ್ಡ್ ಬಿಸ್ಕತ್ಗಾಗಿ ಅಪಹರಣ : ಅಪಹರಣಕ್ಕೊಳಗಾದ ಶಾರೂಕ್ ಸಂಬಂಧಿಕ (ಆತನ ಹೆಸರು ಶಾರೂಕ್) ದುಬೈನಲ್ಲಿ ಇದ್ದು ಆತ ಯಾರೋ ನೀಡಿದ್ದ ಗೋಲ್ಡ್ ಬಿಸ್ಕತ್ನ್ನು ಅಕ್ರಮವಾಗಿ ಮಂಗಳೂರಿಗೆ ತಂದಿದ್ದನು. ಆದರೆ ಅದನ್ನು ಆತ ಸಂಬಂಧಪಟ್ಟವರಿಗೆ ನೀಡಿರಲಿಲ್ಲ. ಇದರಿಂದ ಕುಖ್ಯಾತ ಕ್ರಿಮಿನಲ್ವೊಬ್ಬ ಆತನ ಸಂಬಂಧಿಗಳನ್ನು ಒತ್ತೆಯಾಗಿರಲು ಸೂಚಿಸಿದಂತೆ, ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳಲ್ಲಿ ಅಬೂಬಕ್ಕರ್ ಸಿದ್ದೀಕ್ ಯಾನೆ, ಕರ್ವೇಲ್ ಸಿದ್ದಿಕ್ ಯಾನೆ, ಜೆಸಿಬಿ ಸಿದ್ದೀಕ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೊಲೆಯತ್ನ ಪ್ರಕರಣ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಒಂದು ಕಿಡ್ನ್ಯಾಪ್ ಪ್ರಕರಣ, ಆರೋಪಿ ಕಲಂದರ್ ಶಾಫಿ ಗಡಿಯಾರನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಇರ್ಫಾನ್ ವಿರುದ್ಧ ಬಂಟ್ವಾಳ ಮತ್ತು ಉಳ್ಳಾಲ ಠಾಣೆಯಲ್ಲಿ ತಲಾ ಒಂದು ಪ್ರಕರಣ, ಮೊಹಮ್ಮದ್ ರಿಯಾಜ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕು ಲಕ್ಷ ಬೇಡಿಕೆ ಇಟ್ಟಿದ್ದ ಅಪಹರಣಕಾರರು: ಇನ್ನು ಅಪಹರಣಗೊಂಡಿದ್ದ ಶಾರೂಕ್ ಮಾತನಾಡಿ, ಪೆಟ್ರೋಲ್ ಖಾಲಿಯಾಗಿದೆ ಎಂದು ಕರೆಸಿಕೊಂಡು ನನ್ನನ್ನು ಹಿಡಿದಿಟ್ಟುಕೊಂಡರು. ನನ್ನನ್ನು ಅಪಹರಿಸಿ ಬೇರೆ ಕಡೆ ಕರೆದುಕೊಂಡು ಹೋಗುವಾಗ ಪೊಲೀಸರು ಹಿಡಿದಿದ್ದಾರೆ. ಅವರು ಚಿನ್ನದ ವಿಷಯ ಮಾತಾಡುತ್ತಿದ್ದರು. ನಮಗೆ ನಾಲ್ಕು ಲಕ್ಷ ಕೊಡಬೇಕೆಂದು ಹೇಳುತ್ತಿದ್ದರು. ಅವರು ವಿದೇಶದಿಂದ ನಾನು ಗೋಲ್ಡ್ ತಂದಿದ್ದೇನೆ ಎಂದುಕೊಂಡಿದ್ದರು. ಆದರೆ ಅದು ತಂದದ್ದು ನನ್ನ ಕಜೀನ್ ಎಂದೂ ಅವರು ನನಗೆ ಹೊಡೆದಿದ್ದಾರೆ. ಕಾರಿನಲ್ಲಿ ಕೊಂಡೊಯ್ಯುವಾಗ ಪೊಲೀಸರು ಹಿಡಿದ್ದದ್ದರಿಂದ ಪಾರಾಗಿದ್ದೇನೆ. ನನ್ನನ್ನು ಅಲ್ಲಿಯೇ ಹಿಡಿದಿಟ್ಟುಕೊಂಡು ನನ್ನ ಅಣ್ಣನಿಗೆ ನಾಲ್ಕು ಲಕ್ಷ ಹಣ ತರುವಂತೆ ಕಳುಹಿಸಿದ್ದರು ಎಂದು ಹೇಳಿದರು.
ಇದನ್ನೂಓದಿ:ಗಾಂಜಾ ಪ್ರಕರಣ: ಮತ್ತೆ ಇಬ್ಬರು ವೈದ್ಯರು ಸೇರಿದಂತೆ 9 ಮಂದಿ ಬಂಧನ.. ಬಂಧಿತರ ಸಂಖ್ಯೆ 24 ಕ್ಕೆ ಏರಿಕೆ!