ಮಂಗಳೂರು: ಅರ್ಚಕರ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿ ಗರ್ಭಗುಡಿಗೆ ಬೀಗ ಹಾಕಿದ ಘಟನೆ ಮೂಡುಬಿದಿರೆ ತಾಲೂಕಿನ ಕಡಂದಲೆ ಶ್ರೀಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಕಡಂದಲೆ ದೇವಳದಲ್ಲಿ ದೀಪಾವಳಿ ಬಳಿಕ ಅರ್ಚಕರ ಬದಲಾವಣೆ ಸಂಪ್ರದಾಯ ಪ್ರಕಾರ ನಡೆದುಕೊಂಡು ಬಂದಿರುವ ಪದ್ಧತಿ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಅರ್ಚಕರ ಅವಧಿ ದೀಪಾವಳಿಗೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಆ ಅರ್ಚಕರು ಕಳೆದ ತಿಂಗಳ ಅಂತ್ಯದಲ್ಲಿ ಪೂಜೆಗೆ ಬೇರೆ ಅರ್ಚಕರನ್ನು ನೇಮಿಸುವಂತೆ ವ್ಯವಸ್ಥಾಪನಾ ಸಮಿತಿಗೆ ಪತ್ರ ಬರೆದಿದ್ದರೆ ಎನ್ನಲಾಗಿದೆ
ಈ ಹಿನ್ನಲೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಬೇರೊಂದು ಅರ್ಚಕರನ್ನು ನೇಮಿಸಿದ್ದರು. ನೂತನ ಅರ್ಚಕರಿಗೆ ಧಾರ್ಮಿಕ ವಿಧಿಯಂತೆ ತಂತ್ರಿಗಳು ಪೂಜೆಯ ಹಕ್ಕನ್ನು ಮಂಗಳವಾರ ವಹಿಸಿದ್ದರು. ಆದರೆ ಆ ಬಳಿಕ ಹಿಂದಿನ ಅರ್ಚಕರು ಮತ್ತೆ ತಾನೇ ಪೂಜೆ ಮಾಡುವುದಾಗಿ ಪಟ್ಟು ಹಿಡಿದು ಗರ್ಭಗುಡಿಗೆ ಬೀಗ ಹಾಕಿದ್ದಾರೆ.
ಈ ವಿವಾದ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ತಿಳಿದು ದೇವಸ್ಥಾನದಲ್ಲಿ ತಮ್ಮ ಪ್ರತಿನಿಧಿಗಳ ಮೂಲಕ ಸಭೆ ನಡೆಸಿ ಪರಸ್ಪರ ಹೊಂದಾಣಿಕೆಯಿಂದ ವಿವಾದ ಸರಿಪಡಿಸುವಂತೆ ಸೂಚಿಸಿದ್ದಾರೆ. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ನಿರ್ಣಯವನ್ನು ಪಾಲಿಸಬೇಕು ಮತ್ತು ಅರ್ಚಕರ ಕುರಿತ ವಿವಾದ ಮುಂದುವರಿದಲ್ಲಿ ಇಲಾಖೆಯೇ ಅರ್ಹ ಅರ್ಚಕರನ್ನು ಆಯ್ಕೆ ಮಾಡುತ್ತದೆಂದು ಮೂಲಗಳು ತಿಳಿಸಿವೆ.