ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ರಾಷ್ಟ್ರಮಟ್ಟದಲ್ಲಿಯೇ ಮೊದಲ ರ್ಯಾಂಕ್ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಮಂಗಳೂರಿಗೆ ಸಿಎ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಲಭಿಸಿದೆ.
ಮಂಗಳೂರಿನ ರೋಸಿ ಮಾರಿಯಾ ಡಿಸಿಲ್ವಾ ಮತ್ತು ರಫರ್ಟ್ ಡಿಸಿಲ್ವಾ ದಂಪತಿಯ ಪುತ್ರಿಯಾಗಿರುವ ರುತ್ ಕ್ಲ್ಯಾರ್ ಡಿಸಿಲ್ವ ಕಳೆದ ಹಲವು ವರ್ಷಗಳಿಂದ ಸಿಎ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಆದರೆ ತೇರ್ಗಡೆಯಾಗುತ್ತಿರಲಿಲ್ಲ. ಆದರೆ ಅವರು ಛಲ ಬಿಡದೆ ಮತ್ತೆ ಮತ್ತೆ ಪರೀಕ್ಷೆಯನ್ನು ಎದುರಿಸಿ ಇದೀಗ ರಾಷ್ಟ್ರಮಟ್ಟದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದು ಅದ್ಭುತ ಸಾಧನೆ ಮೆರೆದಿದ್ದಾರೆ.
ರುತ್ ಕ್ಲ್ಯಾರ್ ಅವರು ಇದೀಗ ಸಿಎ ಪರೀಕ್ಷೆಯನ್ನು 3ನೇ ಬಾರಿ ಎದುರಿಸುತ್ತಿದ್ದು, ಈ ಬಾರಿ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಅಲ್ಲದೆ ಮಂಗಳೂರಿಗೆ ಹೆಮ್ಮೆ ತಂದಿದೆ. ನಾಲ್ಕು ವರ್ಷಗಳ ಹಿಂದೆ ಸಿಪಿಟಿ ಪರೀಕ್ಷೆಯಲ್ಲಿ ರುತ್ ಜಿಲ್ಲೆಗೆ ಪ್ರಥಮ ರ್ಯಾಂಕ್ ಗಳಿಸಿದ್ದರು. ಸೈಂಟ್ ತೆರೆಸಾ ಶಾಲೆಯಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿರುವ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಪಡೆದಿದ್ದಾರೆ.
ರುತ್ ಡಿಸಿಲ್ವಾರಿಗೆ ವಿವಿಯನ್ ಅವರು ಸಿಎ ತರಬೇತಿ ನೀಡಿದ್ದು, ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್)ನ ಸಂಚಾಲಕ ನಂದಗೋಪಾಲ್ ಅವರು ಮಾರ್ಗದರ್ಶನ ಮಾಡಿದ್ದರು. ರುತ್ ಡಿಸಿಲ್ವಾ ಸಾಧನೆಯನ್ನು ಪೋಷಕರು, ಮಾರ್ಗದರ್ಶಕರು ಹಾಗೂ ತರಬೇತುದಾರರು ಅಭಿನಂದಿಸುತ್ತಿದ್ದಾರೆ.