ಪುತ್ತೂರು : ಸುಳ್ಯ, ಪುತ್ತೂರು, ಬಂಟ್ವಾಳಗಳಲ್ಲಿ ಕಡಿಮೆ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್ ಸೇವೆ ಕಳೆದ 3 ದಿನಗಳಿಂದ ಸ್ಥಗಿತಗೊಂಡಿದೆ. ಪ್ರತಿ ದಿನ 500ಕ್ಕೂ ಅಧಿಕ ಸಾರ್ವಜನಿಕರು ಇಂದಿರಾ ಕ್ಯಾಂಟೀನ್ನ ಆಹಾರ ಅವಲಭಿಸಿದ್ದಾರೆ. ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಸಿವಿನಿಂದ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.
2018ರಲ್ಲಿ ಸುಳ್ಯ, 2019ರಲ್ಲಿ ಪುತ್ತೂರು, 2020 ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಆಹಾರಕ್ಕಾಗಿ ಸುಳ್ಯದಲ್ಲಿ 500, ಪುತ್ತೂರಲ್ಲಿ 800, ಸುಳ್ಯದಲ್ಲಿ 400 ಜನ ಪ್ರತಿ ದಿನ ಬೆಳಗ್ಗೆ ಹಾಗೂ ಮಧ್ಯಾಹ್ನದ ಆಹಾರಕ್ಕಾಗಿ ಇಂದಿರಾ ಕ್ಯಾಂಟೀನ್ ಅವಲಂಬಿಸಿದ್ದಾರೆ. ಆದರೆ, ಏಕಾಏಕಿ 3 ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ತನ್ನ ಸೇವೆ ಸ್ಥಗಿತಗೊಂಡಿದೆ.
4 ತಿಂಗಳಿನಿಂದ ವೇತನ ಇಲ್ಲ : ಪುತ್ತೂರಿನಲ್ಲಿ 7 ಸಿಬ್ಬಂದಿ, ಸುಳ್ಯದಲ್ಲಿ 7 ಸಿಬ್ಬಂದಿ, ಬಂಟ್ವಾಳದಲ್ಲಿ 6 ಸಿಬ್ಬಂದಿ ಇಂದಿರಾ ಕ್ಯಾಂಟೀನ್ನಲ್ಲಿ ಕರ್ತವ್ಯ ನಿರ್ವಹಹಿಸುತ್ತಿದ್ದು, ಮುಖ್ಯ ಅಡುಗೆದಾರ, ಅಡುಗೆ ಸಹಾಯಕ, ಇಬ್ಬರು ಶುಚಿತ್ವ ಸಿಬ್ಬಂದಿ, ಸಹಾಯಕ ಮ್ಯಾನೇಜರ್, ಓರ್ವ ರಕ್ಷಣಾ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ತಿಂಗಳು ಮುಖ್ಯ ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಮ್ಯಾನೇಜರ್ಗೆ 20 ಸಾವಿರ ರೂ., ಅಡುಗೆ ಸಹಾಯಕ ಹಾಗೂ ರಕ್ಷಣಾ ಸಿಬ್ಬಂದಿಗೆ 8 ಸಾವಿರ ರೂ., ಶುಚಿತ್ವ ಸಿಬ್ಬಂದಿಗೆ 8 ಸಾವಿರ ರೂ. ವೇತನವನ್ನ ಸರ್ಕಾರವೇ ನೀಡುತ್ತಿದೆ. 2020ರ ನವೆಂಬರ್ನಿಂದ ಈವರೆಗೆ ಯಾವುದೇ ವೇತನ ನೀಡಿಲ್ಲ. ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಯಾವುದೇ ಸಾರ್ವಜನಿಕ ಸೇವೆ ನೀಡುತ್ತಿಲ್ಲ.
ಇದನ್ನೂ ಓದಿ.. ಮೈನಿಂಗ್ ನಡೆಸಲು ಎನ್ಒಸಿ ಕೊಡಿಸುವ ಸೋಗಿನಲ್ಲಿ ಉದ್ಯಮಿಗೆ ಕೋಟ್ಯಂತರ ರೂ. ವಂಚನೆ
ವಿದ್ಯಾರ್ಥಿಗಳಿಗೆ ಹಸಿವಿನ ಪಾಠ : ಪುತ್ತೂರು ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುವ ಇಂದಿರಾ ಕ್ಯಾಂಟೀನ್ ಪ್ರತೀ ದಿನ 500ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳಿಗೆ ಆಹಾರ ಪೂರೈಸುತ್ತಿತ್ತು. ಇಂದಿರಾ ಕ್ಯಾಂಟೀನ್ ಬಂದ್ ಆಗಿದ್ದರಿಂದ ವಿದ್ಯಾರ್ಥಿಗಳು ಹಸಿವಿನಿಂದ ಪಾಠ ಕೇಳುವಂತಾಗಿದೆ. ಸುಳ್ಯ ಹಾಗೂ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಮಾರುಕಟ್ಟೆ ಸಮೀಪ ಇದ್ದುದರಿಂದ ಕಾರ್ಮಿಕರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಹೆಚ್ಚು ಉಪಯೋಗವಾಗುತ್ತಿತ್ತು.
ಬಾಕಿ ವೇತನ ನೀಡದೆ ಕಾರ್ಯನಿರ್ವಹಿಸಲು ಅಸಾಧ್ಯ: ಈಗಾಗಲೇ ಹಲವಾರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ವೇತನ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವೇತನ ನೀಡುವವರೆಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸುಳ್ಯ, ಪುತ್ತೂರು, ಬಂಟ್ವಾಳದ ಇಂದಿರಾ ಕ್ಯಾಂಟೀನ್ ಸಹಾಯಕರು ತಿಳಿಸಿದ್ದಾರೆ.