ಮಂಗಳೂರು: ನಗರದ ಹೊರವಲಯದಲ್ಲಿರುವ ಎಸ್ಇಝಡ್ ವ್ಯಾಪ್ತಿಯ ಎಒಟಿ ಮೀನು ಸಂಸ್ಕರಣಾ ಘಟಕದಲ್ಲಿ ದುಡಿಯುತ್ತಿರುವ ಅಸ್ಸಾಂ ಮೂಲದ ವಲಸೆ ಕಾರ್ಮಿಕರಿಗೆ ಗುತ್ತಿಗೆದಾರ ಸಂಬಳ ನೀಡದೆ ಸತಾಯಿಸುತ್ತಿದ್ದ ಪ್ರಕರಣ ಕೊನೆಗೂ ಮುಕ್ತಾಯವಾಗಿದ್ದು, ಬಾಕಿ ಸಂಬಳ ಚುಕ್ತಾ ಮಾಡಲಾಗಿದೆ.
ಎಸ್ಇಝಡ್ ಜನರಲ್ ಮ್ಯಾನೇಜರ್ ಹಿಟಾ ಶ್ರೀನಿವಾಸ ರಾಜು ಮಧ್ಯಸ್ಥಿಕೆಯಲ್ಲಿ ಮೂರು ದಿನಗಳ ಹಿಂದೆ ಮಾತುಕತೆ ನಡೆದಿದ್ದು, ಸ್ಥಳೀಯ ಮುಖಂಡರು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಗುತ್ತಿಗೆದಾರ ಸಂಬಳ ನೀಡದಿರುವುದು, ಕನಿಷ್ಠ ಕೂಲಿ ನೀಡದಿರುವುದು, ಪಿಎಫ್, ಇಎಸ್ಐ ಇಲ್ಲದಿರುವುದನ್ನು ಡಿವೈಎಫ್ಐ ಮುಖಂಡರು ವಿರೋಧಿಸಿ ನಿಯಮಗಳನ್ನು ಪಾಲಿಸುವಂತೆ ಒತ್ತಾಯಿಸಿದ್ದರು.
ಇದೀಗ ಉದ್ಯೋಗವಿಲ್ಲದೆ ಕಂಪನಿಯ ವಸತಿ ಕೋಣೆಯಲ್ಲಿ ನೆಲೆಸಿರುವ 15 ವಲಸೆ ಕಾರ್ಮಿಕರನ್ನು, ಆಗಸ್ಟ್ ತಿಂಗಳ ಆರಂಭದಲ್ಲಿ ಮೀನಿನ ಸೀಜನ್ ಆರಂಭವಾದ ಬಳಿಕ ಗುತ್ತಿಗೆದಾರರು ಮೂಲಕ ಮರುನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಾತುಕತೆಯಲ್ಲಿ ನೀಡಿದ ಭರವಸೆಯಂತೆ ಇಂದು 15 ಕಾರ್ಮಿಕರನ್ನು ಕಂಪನಿಗೆ ಕರೆಸಿ ತಲಾ 16 ಸಾವಿರ ರೂ.ಗಳಂತೆ ಎರಡು ತಿಂಗಳ ಬಾಕಿ ವೇತನವನ್ನು ಕಂಪನಿಯ ಆಡಳಿತ ಪಾವತಿ ಮಾಡಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಇದಕ್ಕೂ ಮೊದಲು ಸಂಬಳ ಸಿಗದೆ ಕಂಗೆಟ್ಟಿದ್ದ ವಲಸೆ ಕಾರ್ಮಿಕರಿಗೆ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ, ಡಿವೈಎಫ್ಐ ಮುಖಂಡರಾದ ಅಬೂಬಕ್ಕರ್ ಬಾವ, ಇಕ್ಬಾಲ್, ರಾಜು ಅವರು ಆಹಾರ ವ್ಯವಸ್ಥೆ ಮಾಡಿದ್ದರು.