ಕುಂದಾಪುರ: ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ಹಳೆಯ ವಿದ್ಯಾರ್ಥಿಯೊಬ್ಬರು ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ತಡವಾಗಿ ತಾಲೂಕಿನ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಪಿ ಶೀಲಾವತಿ ಶೆಟ್ಟಿ ಎಂಬವರು ತಮ್ಮ ಹಳೆಯ ವಿದ್ಯಾರ್ಥಿಯ ಮಗಳ ಮದುವೆಯ ಖರ್ಚಿಗೆಂದು 2014 ಮೇ 23 ರಂದು ಐದು ಲಕ್ಷ ಸಾಲವಾಗಿ ನೀಡಿದ್ದರು. ಅವರು ಹಣವನ್ನು ವಾಪಾಸು ನೀಡಿರಲಿಲ್ಲ. 2019 ರ ಮೇ 27ರಂದು ಶಿಕ್ಷಕಿಗೆ ವಿದ್ಯಾರ್ಥಿಯು ತಾನು ಪಡೆದುಕೊಂಡ ಸಾಲದ ಹಣದ ಬಾಬ್ತುವನ್ನು ವಿಜಯ ಬ್ಯಾಂಕ್ ಸಲ್ವಾಡಿ ಶಾಖೆಯಲ್ಲಿರುವ ಅಕೌಂಟ್ನಿಂದ ಚೆಕ್ ನೀಡಿದ್ದರು.
ಆದರೆ ಚೆಕ್ನ್ನು ಬ್ಯಾಂಕ್ಗೆ ಹಾಕಿದಾಗ ಹಣ ಇಲ್ಲದಿರುವುದಾಗಿ ಹಾಗೂ ಸಹಿ ಬೇರೆ ರೀತಿಯಲ್ಲಿ ಇರುವುದಾಗಿ ಬ್ಯಾಂಕ್ನವರು ಹಿಂಬರಹ ನೀಡಿದ್ದಾರೆ. ಇದರಿಂದಾಗಿ ಆರೋಪಿ ಮೋಸ ಮಾಡಿರುವುದು ಶಿಕ್ಷಕಿಗೆ ಗೊತ್ತಾಗಿದೆ. ಇದರಿಂದಾಗಿ ಶಿಕ್ಷಕಿ ಪಿ ಶೀಲಾವತಿ ಶೆಟ್ಟಿಯವರು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಈ ಸಂಬಂಧ ತಾಲೂಕು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.