ಚಿಕ್ಕಮಗಳೂರು : ದೇವಸ್ಥಾನಕ್ಕೆ ಬರೋವಂತಿಲ್ಲ, ಕೆಲ್ಸನೂ ಯಾರೂ ಕೊಡುವ ಹಾಗಿಲ್ಲ. ಕೆಲ್ಸಾ ಕೊಡೋದು ಇರ್ಲಿ, ಬಹಿಷ್ಕಾರ ಆಗಿರುವವರನ್ನ ಮಾತನಾಡ್ಸಿದ್ರೂ 5 ಸಾವಿರ ರೂ. ದಂಡ ಕಟ್ಟಬೇಕು. ಕುಟುಂಬವೊಂದರ ಮೇಲೆ ಇಂತಹ ಅಮಾನವೀಯ ಬಹಿಷ್ಕಾರವನ್ನ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಹಾಕಲಾಗಿದೆ.
ಸೋಮಶೇಖರ್ ಎಂಬುವರ ಕುಟುಂಬದ ಮೇಲೆ ಇಂತಹ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಸೋಮಶೇಖರ್ ಮೂಲತಃ ಉಪ್ಪಾರ ಜನಾಂಗಕ್ಕೆ ಸೇರಿರುವವರು. ಇವರು ತಾನು ಪ್ರೀತಿಸಿದ ದಲಿತ ಯುವತಿಯನ್ನ ಮದುವೆಯಾಗಿದ್ದಾರೆ. ಇಷ್ಟಕ್ಕೆ ಕೆಂಡಾಮಂಡಲವಾಗಿರುವ ಸ್ವಜಾತಿಯ ಮುಖಂಡರು, ಈ ಕುಟುಂಬದವರಿಗೆ ಬಹಿಷ್ಕಾರ ಹಾಕಿದ್ದಾರೆ.
ಊರಿನ ದೇವಾಲಯಕ್ಕೆ ಪ್ರವೇಶವನ್ನ ಕೊಡ್ತಿಲ್ಲ, ಯಾರೂ ಕೂಡ ಇವರನ್ನ ಯಾವುದೇ ಕಾರ್ಯಕ್ರಮಕ್ಕೂ ಕರೆಯಬಾರದು ಅಂತಾ ಫರ್ಮಾನು ಹೊರಡಿಸಿದ್ದಾರೆ. ಬಹಿಷ್ಕಾರಗೊಂಡಿರುವ ಈ ಕುಟುಂಬದವರನ್ನ ಮಾತನಾಡಿಸಿದ್ರೂ 5 ಸಾವಿರ ರೂ. ದಂಡ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರಂತೆ. ಇದರಿಂದ ಮಾನಸಿಕವಾಗಿ ನೊಂದಿರುವ ಸೋಮಶೇಖರ್ ಕುಟುಂಬ, ನ್ಯಾಯ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಿದೆ.
ಈ ಬಗ್ಗೆ ಕಳೆದ ಕೆಲ ತಿಂಗಳಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೂ ಸಹ ಈ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ತಮ್ಮ ಪಾಡಿಗೆ ತಾವು ಜೀವನ ಮಾಡ್ಕೊಂಡು ಇರ್ತೀವಿ ಅಂತಾ ಸುಮ್ಮನಿದ್ರೂ ಸೋಮಶೇಖರ್ ಕುಟುಂಬಕ್ಕೆ ಕಿರುಕುಳ ತಪ್ಪಿಲ್ವಂತೆ.
ಹೀಗಾಗಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ತಯಾರಿ ನಡೆಸಿದ ಸೋಮಶೇಖರ್ ಕುಟುಂಬವನ್ನ ಹಿಂದೂ ಸಂಘಟನೆಗಳ ಮುಖಂಡರು ಮನವೊಲಿಸಿ ನ್ಯಾಯ ಕೊಡಿಸುವ ಭರವಸೆ ತುಂಬಿದ್ದಾರೆ. ಹೀಗಾಗಿ, ಮತಾಂತರ ಹೊಂದುವ ನಿರ್ಧಾರದಿಂದ ಸೋಮಶೇಖರ್ ಕುಟುಂಬ ಹಿಂದೆ ಸರಿದಿದೆ.
ಪ್ರೀತಿಸಿದ ಹುಡುಗಿ ಜೊತೆ ನಾನು ಮದುವೆಯಾಗಿದ್ದೇನೆ. ಅನ್ಯ ಜಾತಿಯ ಹುಡುಗಿಯನ್ನ ಮದುವೆಯಾಗಬಾರದು ಅಂತಾ ಯಾವ ಕಾನೂನಿನಲ್ಲಿಯೂ ಇಲ್ಲ. ಹೀಗಿರುವಾಗ, ನಮ್ಮ ಕುಟುಂಬದ ಮೇಲೆ ಬಹಿಷ್ಕಾರ ಹೇರಲು ಇವರಿಗೇನು ಅಧಿಕಾರವಿದೆ ಅಂತಾ ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿಯನ್ನ ಈ ಕುಟುಂಬದ ಮೇಲೆ ಸ್ವಜಾತಿಯ ಮುಖಂಡರೇ ಹೇರಿದ್ರೂ ಸಹ ಈ ವಿಚಾರವನ್ನ ಜಿಲ್ಲಾಡಳಿತ ಇನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ಇರೋದು ಸರಿಯಲ್ಲ.