ಚಿಕ್ಕಮಗಳೂರು: ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಹೀಗೆಂದು ವೀರಶೈವ ಲಿಂಗಾಯತ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಬಾಳೆಹೊನ್ನೂರು ಸಮೀಪದ ಶ್ರೀಮದ್ ರಂಭಾಪುರಿ ಮಠದ ಪ್ರಸನ್ನ ರೇಣುಕಾವೀರ ಸೋಮೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.
ಇಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ಎನ್ಆರ್ ಪುರ ತಾಲೂಕಿನಲ್ಲಿರುವ ಬಾಳೆಹೊನ್ನೂರು ಸಮೀಪದ ಶ್ರೀಮದ್ ರಂಭಾಪುರಿ ಮಠಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲದೇ, ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದ ಅವರು, ಸ್ವಾಮೀಜಿಗಳೊಂದಿಗೆ ಕೆಲ ಮಾತುಕತೆ ನಡೆಸಿದರು.
ನಂತರ ಸ್ವಾಮೀಜಿಗಳು ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರೊಂದಿಗೆ ನಡೆದ ಮಾತುಕತೆ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ. ರಾಜ್ಯ ಹಾಗೂ ಜನರ ಅಭಿವೃದ್ದಿಯ ಬಗ್ಗೆ ಆದ್ಯತೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರು ನನ್ನ ಬಳಿ ಹೇಳಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಅಲ್ಲದೇ, ತಮ್ಮ ಮನಸ್ಸಿನಲ್ಲಿರೋ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ಬಿಚ್ಚಿಟ್ಟಿದ್ದಾರೆ. ನಾನೇನು ಧರ್ಮ ಒಡೆಯುವುದನ್ನು ಮಾಡಿಲ್ಲ. ಅದರಿಂದಾಗಿ ನನಗೆ ಖಂಡಿತವಾಗಿ ಪಶ್ಚಾತ್ತಾಪ ಆಗಿದೆ. ಧರ್ಮದ ಹೆಸರಿನಲ್ಲಿ ನಾನು ಎಂದಿಗೂ ಪ್ರವೇಶ ಮಾಡಲ್ಲ. ರಾಜ್ಯದ ಅಭಿವೃದ್ಧಿ ಜನರ ಕಲ್ಯಾಣ, ಗುರಿಯಾಗಿಸಿ ಕೆಲಸ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಯೇ ನನ್ನ ಮುಂದಿನ ಗುರಿ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಾಳೆಹೊನ್ನೂರು ಮಠಕ್ಕೆ ಸಿದ್ದರಾಮಯ್ಯ ಭೇಟಿ: ರುದ್ರಾಕ್ಷಿ ಹಾರ ಹಾಕಿದ ರಂಭಾಪುರಿ ಶ್ರೀ