ಚಾಮರಾಜನಗರ : ವೈದ್ಯಕೀಯ ಉಪಕರಣಗಳನ್ನು ಕೊಂಡಿರುವುದು ₹400-480 ಕೋಟಿಯಷ್ಟೇ.. ಅದ್ಹೇಗೆ 4 ಸಾವಿರ ಕೋಟಿ ರೂ. ಹಗರಣ ಆಗಲಿಕ್ಕೆ ಸಾಧ್ಯ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿರೋ ಹಗರಣದ ಆರೋಪಕ್ಕೆ ಸಚಿವ ಸುರೇಶ್ ಕುಮಾರ್ ಟಾಂಗ್ ನೀಡಿದರು.
ಸರ್ಕಾರಕ್ಕೆ 1 ವರ್ಷ ತುಂಬುತ್ತಿರುವ ಹಿನ್ನೆಲೆ ಸಾಧನೆಗಳನ್ನು ಕುರಿತ ಸುದ್ದಿಗೋಷ್ಠಿ ನಡೆಸಿದ ಸಚಿವರು, ಕಾಂಗ್ರೆಸ್ನಲ್ಲೀಗ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಯಾರು ಸ್ಟ್ರಾಂಗ್ ಎಂಬ ಸ್ಪರ್ಧೆ ಏರ್ಪಟ್ಟಿರುವುದರಿಂದ ಆಡಳಿತ ಪಕ್ಷದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದು ಕಾಣಿಸುತ್ತಿಲ್ಲ. ಬರೀ ಹಗರಣಗಳೇ ಕಾಣಿಸುತ್ತಿವೆ ಎಂದು ಕಿಡಿಕಾರಿದರು.
12 ತಿಂಗಳಲ್ಲಿ 6 ತಿಂಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಪತ್ತುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಪತ್ತುಗಳ ನಿರ್ವಹಣೆಯಲ್ಲಿಯೇ ಕಳೆದಿದೆ. ಸಿಎಂ ರಾಜ್ಯ ಸಂಚಾರದಿಂದ ಯುವಕರು ಕೂಡ ನಾಚಿಕೊಂಡಿದ್ದಾರೆ ಎಂದರು.
ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾಕ್ರಮ ಯೋಜನೆ ಅನುಷ್ಠಾನಕ್ಕೆ ತರುವ ಪ್ರಯತ್ನದಲ್ಲಿದ್ದು, ಅದು ಅಂತಿಮ ಹಂತದಲ್ಲಿದೆ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಶಾಲಾ ವಾಸ್ತವ್ಯ ಹೂಡಿ, ಹಲವು ಬಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು.
ಕೊರೊನಾ ನಡುವೆ ಈ ಬಾರಿ ಯಶಸ್ವಿಯಾಗಿ ನಡೆಸಿದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ದೇಶವೇ ತಿರುಗಿ ನೋಡಿದೆ. ದೊಡ್ಡ ಸವಾಲಾಗಿದ್ದ ಪರೀಕ್ಷೆಯನ್ನು ಸರ್ಕಾರ ಎಲ್ಲ ಇಲಾಖೆಯ ಸಹಯೋಗದಲ್ಲಿ ನಾಡ ಹಬ್ಬದಂತೆ ಪರೀಕ್ಷೆ ಯಶಸ್ವಿಯಾಗಿ ಮತ್ತು ಮಾದರಿಯಾಗಿ ನಡೆಸಿತು ಎಂದು ಸಂತಸ ಹಂಚಿಕೊಂಡರು.