ಚಾಮರಾಜನಗರ: ಹಣವಿಲ್ಲದೆ ಕ್ಯಾನ್ಸರ್ಪೀಡಿತ ಮಗುವನ್ನು ಊರಿಗೆ ಕರೆದೊಯ್ಯಲಾಗದೆ ಪರದಾಡುತ್ತಿದ್ದ ಕುಟುಂಬವೊಂದನ್ನು ಬೆಂಗಳೂರಿನಿಂದ ಚಾಮರಾಜನಗರದ ಗ್ರಾಮಕ್ಕೆ ಕ್ಯಾಬ್ ಚಾಲಕರೊಬ್ಬರು ಉಚಿತವಾಗಿ ಕರೆತಂದು ಬಿಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ರವಿಕುಮಾರ್ ಮತ್ತು ಸುಧಾ ದಂಪತಿಯ 12 ವರ್ಷದ ಸೃಷ್ಟಿ ಎಂಬ ಬಾಲಕಿಯನ್ನು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಂತರ ಪರಿಸ್ಥಿತಿ ಕೈಮೀರಿದೆ ಎಂದು ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆಗಳನ್ನು ಸುತ್ತಿದ ನಂತರ ಬಾಲಕಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಉಳಿಯಲೂ ಆಗದೆ, ಇತ್ತ ಊರಿಗೆ ಹೋಗಲು ಹಣವೂ ಇಲ್ಲದೇ ಅಸಹಾಯಕರಾಗಿ ರೋಧಿಸುತ್ತಿದ್ದ ಕುಟುಂಬವನ್ನು ಕಂಡ ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಗ್ರಾಮದ ಮನು ಎಂಬ ಕ್ಯಾಬ್ ಚಾಲಕ ಉಚಿತವಾಗಿ ಕ್ಯಾನ್ಸರ್ ಪೀಡಿತ ಬಾಲಕಿ ಹಾಗೂ ಪಾಲಕರನ್ನು ಮನೆಗೆ ತಂದು ಬಿಟ್ಟಿದ್ದಾರೆ.
ಈ ವಿಚಾರ ಅರಿತ ಗ್ರಾಮಸ್ಥರು, ಮುಖಂಡರು ಹಣವನ್ನು ಕೊಡಲು ಮುಂದಾದರೂ ಚಾಲಕ ಹಣ ಪಡೆಯಲು ನಿರಾಕರಿಸಿದ್ದಾರೆ. ಕ್ಯಾಬ್ ಚಾಲಕನ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಶಾಲು, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ್ದಾರೆ.