ಚಾಮರಾಜನಗರ: ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 'ಬೈರಾಗಿ' ಪ್ರೀ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದ ಆರಂಭದಿಂದಲೂ "ಅಪ್ಪು-ಅಪ್ಪು.." ಎಂಬ ಘೋಷಣೆಗಳು ಸಾಮಾನ್ಯವಾಗಿತ್ತು. ನಟ ಶಿವರಾಜ್ ಕುಮಾರ್ ಮಾತನಾಡುವ ವೇಳೆಯೂ ಅಭಿಮಾನಿಯೋರ್ವ ಒಂದೇ ಸಮನೆ ಘೋಷಣೆ ಕೂಗುತ್ತಿದ್ದ.
ಇದನ್ನು ಗಮನಿಸಿದ ಶಿವಣ್ಣ, "ಏಯ್ ಸುಮ್ಮನೆ ಕೂತ್ಕೊಳಪ್ಪ, ಅವನದ್ದೂ ನನ್ನದೂ ಒಂದೇ ರಕ್ತ, ನೀನು ಈಗ ನೋಡಿದೀಯ, ನಾನು ಅವನನ್ನು ಕೂಸಿನಿಂದಲೂ ನೋಡಿದ್ದೀನಿ. ಪ್ರೀತಿ ಹೃದಯದಲ್ಲಿರಲಿ, ಕೇವಲ ಗಂಟಲಿನ ಹೊರಗೆ ಮಾತ್ರವಲ್ಲ" ಎಂದು ತರಾಟೆಗೆ ತೆಗೆದುಕೊಂಡು ಬುದ್ಧಿಮಾತು ಹೇಳಿದರು.
ಬಳಿಕ ಮಾತನಾಡಿದ ಅವರು, "ಚಾಮರಾಜನಗರ ನನ್ನ ತವರುಮನೆ ಇದ್ದಂತೆ, ನಮ್ಮೂರು. ಇಲ್ಲಿ ಯಾವಾಗಲೂ ಪ್ರೀತಿ ಜಾಸ್ತಿ. ಒಂದು ವಿಭಿನ್ನ ಕತೆ ಹೊಂದಿರುವ ಸಿನಿಮಾ ಬರುತ್ತಿದ್ದು, ಎಲ್ಲರೂ ನೋಡಬೇಕು. ಒಳ್ಳೆಯ ಸಂದೇಶ ಇರುವ ಸಿನಿಮಾ ಇದಾಗಿದೆ. ಚಿತ್ರದ 25ನೇ ದಿನದ ಸೆಲೆಬ್ರೇಷನ್ಗೆ ಚಾಮರಾಜನಗರಕ್ಕೆ ಬರುತ್ತೇನೆ" ಎಂದು ಭರವಸೆ ಕೊಟ್ಟರು.
ಗಾಜನೂರಿಗೆ ಭೇಟಿ: ತಮ್ಮ ತವರು ನೆಲವಾದ ತಮಿಳುನಾಡಿನ ಗಾಜನೂರಿಗೂ ಶಿವಣ್ಣ ಭೇಟಿ ನೀಡಿದರು. ಪುನೀತ್ ಅಗಲಿದ ಬಳಿಕ ಇದು ಅವರ ಮೊದಲ ಭೇಟಿಯಾಗಿದೆ. ಕಳೆದ ಬಾರಿ ಪುನೀತ್ ಹಾಗೂ ಶಿವರಾಜ್ ಕುಮಾರ್ ಕುಟುಂಬಸ್ಥರು ಒಟ್ಟಿಗೆ ಗಾಜನೂರಿಗೆ ಆಗಮಿಸಿದ್ದರು.
ಅತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದ ಬಳಿಕ ಅಣ್ಣಾವ್ರ ಹಳೆಯ ಮನೆ, ಅಣ್ಣಾವ್ರು ಧ್ಯಾನ ಮಾಡುತ್ತಿದ್ದ ದೊಡ್ಡ ಆಲದಮರದವರೆಗೆ ತೆರಳಿ ಸಂಜೆವರೆಗೂ ವಿಶ್ರಾಂತಿ ತೆಗೆದುಕೊಂಡರು. ನಟ ಡಾಲಿ ಧನಂಜಯ ಜೊತೆಗಿದ್ದರು.
ಇದನ್ನೂ ಓದಿ: ತಂದೆಯ ಜನ್ಮಸ್ಥಳ ಗಾಜನೂರಲ್ಲಿ ಶಿವಣ್ಣ, ಅಪ್ಪು: ಅಭಿಮಾನಿಗಳೊಂದಿಗೆ ಸೆಲ್ಫಿ, ಭರ್ಜರಿ ಬಾಡೂಟ