ಬಳ್ಳಾರಿ: ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರಿಗೆ ಖಾಸಗಿ ಆಪ್ತ ಸಹಾಯಕನಾಗಿದ್ದ ರಾಜಣ್ಣ ಸಚಿವರು ಹಾಗೂ ಸಿಎಂ ಕಚೇರಿಯ ಹೆಸರೇಳಿಕೊಂಡು ಸಾರ್ವಜನಿಕರಿಗೆ ವಂಚಿಸಿದ ಆರೋಪದಡಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಇದಾದ, ಬೆನ್ನಲ್ಲೇ ಸಚಿವರ ಹಿಂದೆ ಖಾಸಗಿ ಆಪ್ತ ಸಹಾಯಕರ ದೊಡ್ಡ ದಂಡೇ ಇದೆ ಎಂಬುದು ಗೊತ್ತಾಗಿದೆ.
ಸರ್ಕಾರಿ ಆಪ್ತ ಸಹಾಯಕರು ಯಾರೆಂದು ಗೊತ್ತಿಲ್ಲ : ಸಾಮಾನ್ಯವಾಗಿ ಸಚಿವರಾದವರಿಗೆ ಸರ್ಕಾರಿ ಆಪ್ತ ಸಹಾಯಕರೊಬ್ಬರು ಇರುತ್ತಾರೆ. ಆದರೆ, ಸಚಿವ ಶ್ರೀರಾಮುಲು ಅವರ ಸರ್ಕಾರಿ ಆಪ್ತ ಸಹಾಯಕ ಯಾರೆಂಬುದು ಜನರಿಗೆ ಗೊತ್ತೇ ಇಲ್ಲವಂತೆ. ಕಳೆದ ಎರಡು ದಶಕದಿಂದಲೂ ಶ್ರೀರಾಮುಲು ಅವರ ಜೊತೆ ಬರೀ ಖಾಸಗಿ ಆಪ್ತ ಸಹಾಯಕರೇ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು? ಬಳ್ಳಾರಿ ನಗರದಲ್ಲಿ ಅಂದಾಜು ಹತ್ತಕ್ಕೂ ಹೆಚ್ಚು ಮಂದಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಹಾಗೂ ಗದಗದಲ್ಲೂ ಕೂಡ ಕೆಲ ಖಾಸಗಿ ಆಪ್ತ ಸಹಾಯಕರು ಸಚಿವರಿಗೆ ಇದ್ದಾರೆ ಎನ್ನಲಾಗ್ತಿದೆ.
ಸರ್ಕಾರಿ ಕಚೇರಿಗಳ ಕೆಲಸ ಮಾಡಿಸಲು ಸರ್ಕಾರಿ ಆಪ್ತ ಸಹಾಯಕರ ಅಗತ್ಯತೆ ಇದೆ. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಖಾಸಗಿ ಆಪ್ತ ಸಹಾಯಕರು ಯಾಕಿದ್ದಾರೆ..? ಇವರ ಕೆಲಸ, ಕಾರ್ಯಗಳೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಆಪ್ತ ಸಹಾಯಕ ರಾಜಣ್ಣ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಜನರು ಸಚಿವರ ಖಾಸಗಿ ಆಪ್ತ ಸಹಾಯಕರನ್ನು ಅನುಮಾನದಿಂದ ನೋಡುವಂತಾಗಿದೆ.
ಓದಿ : ರಾಮುಲುಗೆ ಮಾಹಿತಿ ನೀಡದೆಯೇ ಪಿಎ ವಿರುದ್ಧ ದೂರು: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ್ರಾ ವಿಜಯೇಂದ್ರ?