ಬಳ್ಳಾರಿ: ತಾಲೂಕಿನ ತಾಳೂರು ಗ್ರಾಮದಲ್ಲಿ ಕುಡಿಯುವ ನೀರನ್ನು ಶುದ್ಧಿಕರಿಸಿದೇ, ಕಲುಷಿತ ನೀರು ಸರಬಾರಜು ಮಾಡಿರುವ ಹಿನ್ನೆಲೆ ಕೆಲ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ಕುಡಿಯುವ ನೀರಿಗೆ ಕೆರೆ ಇದ್ದು, ಪ್ರತಿ ವರ್ಷ ಶುದ್ಧೀಕರಿಸಿದ ನೀರು ಸರಬರಾಜು ಆಗುತ್ತಿತ್ತು. ಆದರೆ ಈ ವರ್ಷ ಕೆರೆ ಸ್ವಚ್ಛಗೊಳಿಸಿಲ್ಲ. ನೇರವಾಗಿ ಕಾಲುವೆಯಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಿದ ಪರಿಣಾಮ ಹಲವರಲ್ಲಿ ರೋಗಗಳು ಕಾಣಿಸಿಕೊಂಡು ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ಹೇಳಲಾಗುತ್ತಿದೆ.
ಕೆಟ್ಟು ನಿಂತು ಶುದ್ಧೀಕರಣ ಘಟಕ: ತಾಳೂರು ಮತ್ತು ಊಳೂರು ಗ್ರಾಮಗಳಲ್ಲಿ ಮೂರು ನೀರಿನ ಶುದ್ಧೀಕರಣ ಘಟಕಗಳಿವೆ. ತಾಳೂರಿನ ಎರಡು ಘಟಕಗಳಲ್ಲಿ ಒಂದು ಘಟಕ ಕೆಟ್ಟಿದೆ. ಇನ್ನೊಂದು ಘಟಕಕ್ಕೆ ನೀರಿನ ಅಭಾವವಿದೆ. ಊಳೂರು ಶುದ್ಧೀಕರಣ ಘಟಕವೇ ಎಲ್ಲರಿಗೂ ಆಸರೆಯಾಗಿದೆ. ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಆಗ್ರಹಿಸಿದರೂ ಈವರೆಗೂ ರಿಪೇರಿ ಮಾಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆರೆ ನಿರ್ವಹಣೆ ಸರಿಯಿಲ್ಲ: ಗ್ರಾಮದ ಕುಡಿಯುವ ನೀರಿನ ಕೆರೆ ನಿರ್ವಹಣೆಗಾಗಿ ಸರ್ಕಾರ ಐದು ವರ್ಷ ಗುತ್ತಿಗೆ ನೀಡಿದೆ. ಕಳೆದ ಒಂದು ವರ್ಷದ ಅನುದಾನ ಬಿಡುಗಡೆ ಮಾಡಿದರೂ ಕೂಡ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಕೆರೆಯ ಸ್ವಚ್ಛತೆ, ನಿರ್ವಹಣೆಯ ಸಿಬ್ಬಂದಿಗೆ ವೇತನ, ಮೋಟರ್ಗಳ ದುರಸ್ತಿ ಮಾಡಲು ವಿಳಂಬ ಸೇರಿದಂತೆ ಸಮರ್ಪಕವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಕಿಡಿಕಾರಿದ್ದಾರೆ.
ಗುತ್ತಿಗೆದಾರರಿಗೆ ಸೂಚನೆ: ಕಲುಷಿತ ನೀರು ಸರಬಾರಜು ಮಾಡಿರುವ ಬಗ್ಗೆ ಜಿ.ಪಂ ಸಿಪಿಒ ಚಂದ್ರಶೇಖರ್ ಗುಡಿ, ನೀರು ಸರಬಾರಜು ಕಾರ್ಯನಿರ್ವಾಹಕ ಇಂಜಿನಿಯರ್, ಕೆರೆಯ ಗುತ್ತಿಗೆದಾರ, ಪಿಡಿಒ ಹಾಗೂ ಗ್ರಾ.ಪಂ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ ಆ.12ರೊಳಗೆ ಕೆರೆಗೆ ನೀರು ತುಂಬಿಸಿ, ಶುದ್ಧೀಕರಿಸಿದ ಕುಡಿಯುವ ನೀರು ಸರಬಾರಜು ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ನಿಯಮಗಳು ಜಾರಿ.. ವಾರ್ಡಿಗೆ ಒಂದೇ ಗಣಪ ಸೇರಿ ಏನೆಲ್ಲ ರೂಲ್ಸ್?