ಬಳ್ಳಾರಿ: ಗಣಿನಗರಿ ಬಳ್ಳಾರಿಯಲಿ ಸದ್ದಿಲ್ಲದೇ ಗೋಹತ್ಯೆ ನಡೆದಿರೋದು ಬೆಳಕಿಗೆ ಬಂದಿದೆ. ಬಕ್ರೀದ್ ಹಬ್ಬದ ನಿಮಿತ್ತ ದನದ ಮಾಂಸ ಮಾರಾಟದ ಭರಾಟೆಯೂ ಎಗ್ಗಿಲ್ಲದೇ ಸಾಗಿದೆ. ಬಳ್ಳಾರಿ ನಗರ ಹೊರವಲಯದ ಕಸಾಯಿ ಖಾನೆಯೊಂದರಲ್ಲಿ ಹತ್ತಾರು ಗೋವುಗಳನ್ನು ಹತ್ಯೆಗೈಯ್ಯಲಾಗಿದೆ.
ಕೆಎ- 35, ಸಿ- 4113 ಸಂಖ್ಯೆಯ ಆಟೋರಿಕ್ಷಾವೊಂದರಲ್ಲಿ ಗೋ ಮಾಂಸ ಸಾಗಣೆ ಮಾಡುವ ದೃಶ್ಯವೊಂದು ಕಂಡು ಬಂದಿದೆ. ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಿಂದ ಗುಗ್ಗರಹಟ್ಟಿ ಪ್ರದೇಶದತ್ತ ಗೋವಿನ ಮಾಂಸವನ್ನು ಸಾಗಣೆ ಮಾಡುವಂತಹ ದೃಶ್ಯದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲೀಗ ವೈರಲ್ ಆಗಿದೆ. ಅದನ್ನು ವೀಕ್ಷಣೆ ಮಾಡಿದ ಗೋ ಪ್ರೇಮಿಗಳು ಕಟುಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಕ್ರೀದ್ ಹಬ್ಬದ ಆಸುಪಾಸಿನಲ್ಲಿ ಈ ಘಟನೆಯು ನಡೆದಿರಬಹುದೆಂದು ಶಂಕಿಸಲಾಗಿದೆ. ಹಬ್ಬ ಆಚರಣೆ ಎರಡು ದಿನಗಳ ಹಿಂದಷ್ಟೇ ಜಿಲ್ಲಾ ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತಾದ್ರೂ ಅದನ್ನ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಇದೀಗ ಗೋಹತ್ಯೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ,