ಚಿಕ್ಕೋಡಿ: ಕರ್ನಾಟಕದ ರಾಜ್ಯದ ದೊಡ್ಡ ಜಿಲ್ಲೆ ಎಂದು ಬೆಳಗಾವಿ ಕರೆಸಿಕೊಂಡಿದೆ. ಬೆಳಗಾವಿಯಲ್ಲಿ ಬೃಹತ್ ಕಾರ್ಖಾನೆಗಳು ತಲೆ ಎತ್ತಿವೆ. ಆದರೆ. ದೂರದ ತಾಲೂಕು, ಗ್ರಾಮಗಳ ಜನರು ನೆರೆಯ ಮಹಾರಾಷ್ಟ್ರ ಸಮೀಪವಾಗಿದ್ದರಿಂದ ಅಲ್ಲಿಗೇ ನಿತ್ಯ ಕೂಲಿ ಅರಸಿ ಹೋಗುತ್ತಿದ್ದಾರೆ.
ದೂರದ ತಾಲೂಕುಗಳಾದ ಅಥಣಿ, ಕಾಗವಾಡ, ರಾಯಬಾಗ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ ಜನರು ಮಹಾರಾಷ್ಟ್ರದ ಸಾಂಗಲಿ, ಕೊಲ್ಲಾಪೂರ ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ದಿನಗೂಲಿಗೆ ತೆರಳುತ್ತಾರೆ.
ಮಹಾರಾಷ್ಟ್ರಾದ ಎಂಐಡಿಸಿ (ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್) ಸ್ಟೀಲ್ ತಯಾರಿಕೆ, ಟೆಕ್ಸ್ಟೈಲ್, ಆಟೋಮೊಬೈಲ್, ಹಾರ್ಡವೇರ್ನಂತಹ ದೊಡ್ಡ ಕಾರ್ಖಾನೆಗಳಿವೆ. ನೂರಕ್ಕೂ ಹೆಚ್ವು ಕಂಪನಿಗಳ ತಯಾರಿಕಾ ಘಟಕಗಳಿದ್ದು, ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶಗಳು ಲಭಿಸಿದ್ದವು. ಆದರೆ, ಕೊರೊನಾ ಹಿನ್ನೆಲೆ ಕಂಪನಿಗಳು ಕೆಲಸ ಸ್ಥಗಿತಗೊಳಿಸಿವೆ.
ಈ ಕಂಪನಿಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ. ಅವರೆಲ್ಲರ ಬದುಕು ಮತ್ತೇ ಮರಳಿ ಸಹಜ ಸ್ಥಿತಿಗೆ ಮರಳಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಬೇಕಿದೆ.
ಇಲ್ಲಿನ ಕಾರ್ಮಿಕರಿಗೆ ಸ್ಥಳೀಯವಾಗಿ ಸರ್ಕಾರ ನೂತನ ಕಾರ್ಖಾನೆ ಪ್ರಾರಂಭಿಸಬೇಕು. ಮಹಾರಾಷ್ಟ್ರದಲ್ಲಿ ಕೆಲಸ ಕಳೆದುಕೊಂಡವರಿಗೆ ಕೆಲಸ ನೀಡಲು ಕರ್ನಾಟಕ ಸರ್ಕಾರ ಮುಂದಾಗಬೇಕಿದೆ.