ಬೆಳಗಾವಿ : ತನ್ನ ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನ ಯೋಧ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಖಾನಾಪುರ ತಾಲೂಕಿನ ತಿವೊಲಿವಾಡಾ ಎಂಬ ಪುಟ್ಟ ಗ್ರಾಮದಲ್ಲಿ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿನ್ಸೆಂಟ್ ಫೆರೇರಾ (30) ಎಂಬಾತ ಸೈನಿಕ ಮತ್ತು ಆತನ ಇಬ್ಬರು ಸಹೋದರರಿಂದ ಕೊಲೆಗೀಡಾಗಿದ್ದಾನೆ. ಯೋಧ ವೊಲೇಪ್ ಫೆರೇರಾ ಮತ್ತು ಆತನ ಇಬ್ಬರು ಸಹೋದರರಾದ ಅಲೆಕ್ಸ್ ಮತ್ತು ಮೈಕಲ್ ಎಂಬುವರು ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ.
ಘಟನೆ ಹಿನ್ನೆಲೆ : ಕೊಲೆಯಾದ ವಿನ್ಸೆಂಟ್ ಫೆರೇರಾ ಗೋವಾದ ಖಾಸಗಿ ಟೈಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಲಾಕ್ಡೌನ್ ಹಿನ್ನೆಲೆ ಸ್ವಗ್ರಾಮಕ್ಕೆ ಬಂದಿದ್ದವನು ಮರಳಿ ಹೋಗಿರಲಿಲ್ಲ. ಈ ವೇಳೆ ಎದುರು ಮನೆಯ ಯೋಧ ವೊಲೇಪ್ ಫೆರೇರಾ ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ.
ಇಬ್ಬರದ್ದು ಮಹಡಿ ಮೇಲೆ ಕೊಠಡಿ ಇದ್ದ ಕಾರಣ, ಸಲುಗೆ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇದು ಯೋಧ ವೊಲೇಪ್ ಫೆರೇರಾಗೆ ಗೊತ್ತಾಗಿ ಆತನನ್ನ ಹೇಗಾದರೂ ಮಾಡಿ ಹತ್ಯೆ ಮಾಡಬೇಕು ಎಂದು ಸಂಚು ರೂಪಿಸಿದ್ದ.
ಅದರಂತೆ ತನ್ನ ಇಬ್ಬರು ಸಹೋದರರಾದ ಅಲೇಕ್ಸ್ ಮತ್ತು ಮೈಕಲ್ ಜತೆಗೂಡಿ ಪಾರ್ಟಿ ಮಾಡೋಣ ಬಾ ಎಂದು ವಿನ್ಸೆಂಟ್ನನ್ನ ಕರೆದುಕೊಂಡು ಹೋಗಿದ್ದಾರೆ. ಜ.3ರಂದು ರಾತ್ರಿ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ನಂತರ ಭತ್ತದ ಬಣವೆಯಲ್ಲಿ ಶವವನ್ನು ಸುಟ್ಟು ಅಲ್ಲಿಂದ ಎಸ್ಕೇಪ್ ಆಗಿರುತ್ತಾರೆ.
ಇದಾದ ಬಳಿಕ ಮಾರನೇ ದಿನ ಜಮೀನು ಮಾಲೀಕ ಹೋದಾಗ ಸುಟ್ಟು ಕರಕಲಾದ ವಿನ್ಸೆಂಟ್ ಶವ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾನೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮೃತನ ಅಕ್ಕನಿಂದ ಕೇಸ್ ತೆಗೆದುಕೊಂಡು ತನಿಖೆ ಆರಂಭಿಸುತ್ತಾರೆ.
ಮೊದಲು ಆತ್ಮಹತ್ಯೆ ಅಂದುಕೊಂಡಿದ್ದ ಪೊಲೀಸರಿಗೆ ನಂತರ ಶವ ಪರೀಕ್ಷೆ ವರದಿಯಲ್ಲಿ ಕುತ್ತಿಗೆ ಮತ್ತು ಹಣೆ ಭಾಗಕ್ಕೆ ಬಲವಾದ ಏಟಿನಿಂದ ಹೊಡೆದು ಕೊಲೆ ಮಾಡಿದ್ದಾರೆಂಬುದು ಗೊತ್ತಾಗಿದೆ.
ಬಳಿಕ ಊರಿನವರ ಬಳಿ ಮಾಹಿತಿ ಪಡೆದುಕೊಂಡ ಪೊಲೀಸರಿಗೆ, ಮೃತ ಯುವಕ ಯೋಧನ ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಗುತ್ತದೆ. ಮೊದಲು ಯೋಧನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಅನುಮಾನಗೊಂಡು, ಯೋಧನ ಮನೆಯವರನ್ನ ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದಾಗಿ ಯೋಧನ ಸಹೋದರರು ಒಪ್ಪಿಕೊಂಡಿದ್ದಾರೆ.
ಆರೋಪಿ ಬಂಧನ : ಉತ್ತರಪ್ರದೇಶದಿಂದ ಬೆಂಗಳೂರಿಗೆ ಕೆಲಸ ನಿಮಿತ್ತ ಬಂದಿದ್ದ ಯೋಧ, ವಾಪಸ್ ರೈಲು ಮೂಲಕ ಯುಪಿಗೆ ತೆರಳುವುದಾಗಿ ಹೇಳಿ ಟಿಕೆಟ್ ಬುಕ್ ಮಾಡಿದ್ದಾನೆ. ಆದರೆ, ರೈಲಿಗೆ ಹೋಗದೇ ಬಸ್ ಮೂಲಕ ಬೆಳಗಾವಿಗೆ ಬಂದು ಅಂದು ರಾತ್ರಿ ಪಾರ್ಟಿ ನೆಪದಲ್ಲಿ ವಿನ್ಸೆಂಟ್ ಕೊಲೆ ಮಾಡಿದ್ದಾನೆ.
![illegal-relationship-with-his-wife-young-man-murdered-soldier](https://etvbharatimages.akamaized.net/etvbharat/prod-images/kn-bgm-06-16-murder-pkg-vsl-ka10029_16022021184033_1602f_1613481033_407.jpg)
ಮಾರನೇ ದಿನ ವಿಮಾನದ ಮೂಲಕ ಯುಪಿಗೆ ತೆರಳಿ ನಿಗದಿಯಾಗಿದ್ದ ಸಮಯಕ್ಕೆ ಕೆಲಸಕ್ಕೆ ಹಾಜರಾಗಿರುತ್ತಾನೆ. ಇದು ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಉತ್ತರಪ್ರದೇಶ ಸೇನಾ ಕ್ಯಾಂಪ್ಗೆ ಹೋಗಿ ಯೋಧನನ್ನ ಬಂಧಿಸಿ ಕರೆ ತಂದಿದ್ದಾರೆ.
ಕೊಲೆಯಾದ ವಿನ್ಸೆಂಟ್ ಮದುವೆ ಮಾಡಲು ತಾಯಿ ಸಿದ್ದತೆ ನಡೆಸಿದ್ದರಂತೆ. ಆದರೆ, ಯೋಧನ ಹೆಂಡತಿ ಜತೆಗೆ ಅಕ್ರಮ ಸಂಬಂಧವಿರಿಸಿಕೊಂಡು, ಮಾಡಬಾರದ ಕೃತ್ಯ ಮಾಡಿ ಇದೀಗ ಮಗ ಹತ್ಯೆಯಾಗಿದ್ದಾನೆ.
ಇದರಿಂದ ತಾಯಿ ಏಕಾಂಗಿಯಾಗಿ ಬದುಕುವ ಪರಿಸ್ಥಿತಿ ಬಂದೊದಗಿದೆ. ಇತ್ತ ಕೊಲೆ ಮಾಡಿದ ಯೋಧನ ಕುಟುಂಬ ಮೂವರು ಜೈಲು ಪಾಲಾಗಿದ್ದಾರೆ. ಹೆಂಡತಿ ಮಾತ್ರ ಆರೋಪ ಹೊತ್ತು ಹೊರಗಿದ್ದಾಳೆ. ನಿಜಕ್ಕೂ ಅಕ್ರಮ ಸಂಬಂಧವಿದ್ದೇ ಆಗಿದ್ರೇ, ಅದರಿಂದಾಗಿ ಎಷ್ಟು ಜೀವಗಳ ಬದುಕೇ ಹಾಳಾಗಿ ಹೋಯ್ತಲ್ವೇ..