ಚಿಕ್ಕೋಡಿ: ಮಕ್ಕಳ ಗ್ರಂಥಾಲಯವಿರುವ ಜಾಗದಲ್ಲಿಯೇ ಪಕ್ಷದ ಕಚೇರಿ ತೆರೆಯುವ ವಿಚಾರವಾಗಿ ಚಿಕ್ಕೋಡಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ವಿಚಾರ ಕೇಳಬೇಡಿ. ಅದು ಅಲ್ಲಿಯ ವಿಚಾರ. ಇಲ್ಲಿ ಏನಿದ್ದರೂ 'ಒಂದು ದೇಶ, ಒಂದು ಸಂವಿಧಾನ'ದ ಕಾರ್ಯಕ್ರಮದ ಬಗ್ಗೆ ಕೇಳಿ ಎಂದರು.
ನಗರದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ತೊಂದರೆಯಾಗುವ ರೀತಿ ಪಕ್ಷದ ಕಚೇರಿ ಮಾಡ್ತಿಲ್ಲ. ಮಾಜಿ ಶಾಸಕ ವಿಜಯಕುಮಾರ್ ಪಾಠ ಮಾಡೋ ಜಾಗಕ್ಕೆ ಯಾವುದೇ ಧಕ್ಕೆ ಮಾಡ್ತಿಲ್ಲ. ನೆಲ ಮಹಡಿಯಲ್ಲಿ ನನ್ನ ಕಚೇರಿ ಮಾಡಲಾಗ್ತಿದೆ. ಮೊದಲನೇ ಹಾಗೂ ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳ ಗ್ರಂಥಾಲಯ ಹಾಗೂ ಶಾಲಾ ತರಗತಿಗಳು ನಡೆಯುತ್ತವೆ. ಅಲ್ಲಿ ಯಾವುದೇ ತೊಂದರೆ ಮಾಡಿಲ್ಲ ಎಂದರು.