ಬೆಳಗಾವಿ : ಬಾಕಿ ಬಿಲ್ ತುಂಬಿಲ್ಲ ಎಂಬ ಕಾರಣಕ್ಕೆ ನಿವೃತ್ತ ಯೋಧನ ಮೃತದೇಹ ನೀಡದ ಹಿನ್ನೆಲೆ ಅವರ ಕುಟುಂಬಸ್ಥರು ಪರದಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕೊಲ್ಲಾಪುರ ಸರ್ಕಲ್ ಬಳಿಯಿರುವ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ಗೆ ಸೇರಿದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಯೋಧನ ಮೃತದೇಹ ನೀಡದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಯೋಧ ತಾಲೂಕಿನ ಉಚಗಾಂವ ಗ್ರಾಮದ ರಾಜೇಂದ್ರ ಮೆಣಸೆ (41) ನಿವಾಸಿ ಎಂದು ಗುರುತಿಸಲಾಗಿದೆ. ಮೃತ ಯೋಧನಿಗೆ ಕಳೆದ 23 ದಿನಗಳ ಹಿಂದೆ ಕೋವಿಡ್ ತಗುಲಿದ ಪರಿಣಾಮ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಎರಡು ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆ ಸಿಬ್ಬಂದಿ ಮೃತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸಂಬಂಧಿಕರು ಹೇಳುವಂತೆ, ಈಗಾಗಲೇ 3 ಲಕ್ಷ 10 ಸಾವಿರ ರೂ. ಪಾವತಿಸಿದ್ದೇವೆ. ಮತ್ತೆ 3 ಲಕ್ಷ 63 ಸಾವಿರ ರೂ. ಪಾವತಿಸಲು ಹೇಳ್ತಿದ್ದಾರೆ. ದುಡ್ಡು ಕೊಡಿ ಆಮೇಲೆ ಮೃತದೇಹ ಕೊಡ್ತೀವಿ ಅಂತ ಹೇಳುತ್ತಿದ್ದಾರೆ. ಇದಲ್ಲದೇ 23 ದಿನಗಳಿಂದ ಯಾವ ರೀತಿ ಚಿಕಿತ್ಸೆ ನೀಡಿದ್ದರು ಎಂಬ ಬಗ್ಗೆಯೂ ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡುತ್ತಿಲ್ಲ.
ದೇಶ ಸೇವೆ ಮಾಡಿದ ಯೋಧನಿಗೆ ಈ ರೀತಿ ಪರಿಸ್ಥಿತಿ ಆದ್ರೆ ಹೇಗೆ?' ಅಂತ ಯೋಧನ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಖಾಸಗಿ ಆಸ್ಪತ್ರೆ ಎದುರು ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದರು.
ಓದಿ: ನಾನು ಮುಖ್ಯಮಂತ್ರಿಯಾದರೆ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇನೆ: ವಾಟಾಳ್ ನಾಗರಾಜ್