ಬೆಂಗಳೂರು : ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಬಳಿಕ ಮಾಜಿ ಸಚಿವ ಡಿ.ಸುಧಾಕರ್ ಹೆಸರು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ವಿಚಾರಣೆಗೊಳಪಡಿಸಲು ಎಸ್ಐಟಿ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ. ನಾಳೆ ಆಡುಗೋಡಿಯ ತಾಂತ್ರಿಕ ಕೇಂದ್ರಕ್ಕೆ ಬರುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವತಿ ಕಾಲ್ಲಿಸ್ಟ್ನಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಜತೆ ಮಾತನಾಡಿದ ಬಗ್ಗೆ, ಕಳೆದ ವರ್ಷ ಆಗಸ್ಟ್ನಿಂದ ನವೆಂಬರ್ವರೆಗೂ ಸಂಪರ್ಕದಲ್ಲಿದ್ದರು ಎಂಬ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ಸಿಡಿ ಬಿಡುಗಡೆಗೆ ಕೆಲ ದಿನಗಳ ಹಿಂದೆ ಯುವತಿಯೊಂದಿಗೆ ಹಣಕಾಸು ವ್ಯವಹಾರ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್ಐಟಿ ತನಿಖಾಧಿಕಾರಿಗಳು ಮಾಜಿ ಸಚಿವರಿಗೆ ನೋಟಿಸ್ ನೀಡಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಇವತ್ತು ಮಾಧ್ಯಮಗಳೆದುರು ಸ್ಪಷ್ಟೀಕರಣ ನೀಡಿದ್ದ ಮಾಜಿ ಸಚಿವ ಸುಧಾಕರ್, ತಾವು ಯುವತಿ ಜತೆಗೆ ಮಾತನಾಡಿಲ್ಲ ಅಂತೇನೂ ಅಲ್ಲಗಳೆದಿರಲಿಲ್ಲ. ಆದರೆ, ತಮ್ಮಿಬ್ಬರ ನಡುವೆ ಹಣಕಾಸು ವ್ಯವಹಾರ ನಡೆದಿದೆ ಅನ್ನೋದನ್ನ ಮಾತ್ರ ಅಲ್ಲಗಳೆದಿದ್ದರು.