ಬೆಂಗಳೂರು: ಕೋವಿಡ್ನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಬೀದಿಬದಿಯ ವ್ಯಾಪಾರಿಗಳ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಇದೀಗ ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆಯ ವತಿಯಿಂದ ಆರ್ಥಿಕ ನೆರವು ಕೊಡಿಸಲು ಮುಂದಾಗಿದೆ.

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹರಿದೀಪ್ ಸಿಂಗ್ ಪುರಿ ಜತೆ ವಿಡಿಯೋ ಸಂವಾದ ನಡೆಸಿದ ರಾಜ್ಯ ಜೀವನೋಪಾಯ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ರಾಜ್ಯ ಇದುವರೆಗೂ 1,13,403 ಬೀದಿ ವ್ಯಾಪಾರಿಗಳನ್ನು ಗುರುತಿಸಿದೆ. ಈ ಪೈಕಿ ಸಾಲಕ್ಕಾಗಿ ಸಲ್ಲಿಸಿದ 68,325 ಅರ್ಜಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇವುಗಳಲ್ಲಿ ಬ್ಯಾಂಕುಗಳು 10,920 ಸಾಲದ ಅರ್ಜಿಗಳನ್ನು ಮಾತ್ರ ಸ್ವೀಕರಿಸಿದ್ದು, ಇದುವರೆಗೂ ಕೇವಲ 571 ಮಂದಿಗೆ ಮಾತ್ರ ಸಾಲ ನೀಡಿವೆ. ಇನ್ನೂ 9,736 ಅರ್ಜಿಗಳು ಬಾಕಿ ಇವೆ ಎಂಬ ಅಂಶವನ್ನು ಕೇಂದ್ರ ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಸಾಲವನ್ನು ಕೂಡಲೇ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಬ್ಯಾಂಕರುಗಳ ಸಭೆ ನಡೆಸಿ ಅರ್ಜಿಗಳ ವಿಲೇವಾರಿಗೆ ಸೂಚಿಸಲಾಗಿದೆ. ಅದರ ನಂತರವೂ ಬ್ಯಾಂಕುಗಳು ಸಾಲ ನೀಡದಿದ್ದಲ್ಲಿ ಕ್ರಮ ವಹಿಸಲಾಗುವುದು ಎಂದು ಪುರಿ ಅವರು ಉಪ ಮುಖ್ಯಮಂತ್ರಿಗೆ ಭರವಸೆ ನೀಡಿದರು.
ಹತ್ತು ಸಾವಿರ ರೂ. ಸಾಲ:
ಕೋವಿಡ್ ಬಂದ ಮೇಲೆ ಲಾಕ್ಡೌನ್ ಕಾರಣದಿಂದ ಬೀದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಜೀವನೋಪಾಯಕ್ಕೆ ಕಷ್ಟವಾಗಿ ಭಾರಿ ಕಷ್ಟಕ್ಕೆ ತುತ್ತಾದರು. ಆದರೂ ರಾಜ್ಯ ಸರ್ಕಾರವು ಅವರಿಗೆ ಸ್ವಲ್ಪಮಟ್ಟಿಗಿನ ನೆರವು ನೀಡಿದೆ. ಈಗ ಅವರು ಹೊಸದಾಗಿ ಜೀವನೋಪಾಯ ಕಂಡುಕೊಳ್ಳಲು ಬ್ಯಾಂಕುಗಳಿಂದ ವಾರ್ಷಿಕ ಶೇ.7ರಷ್ಟು ಬಡ್ಡಿದರದಲ್ಲಿ ತಲಾ 10 ಸಾವಿರ ರೂ. ಸಾಲ ಕೊಡಿಸಬೇಕು ಎಂದು ಉಪ ಮುಖ್ಯಮಂತ್ರಿ ಮನವಿ ಮಾಡಿದರು.
ಇದೇ ಬೀದಿ ವ್ಯಾಪಾರಿಗಳನ್ನು ಗುರುತಿಸುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವನ್ನು ರಾಜ್ಯವು ಕೇವಲ ಮೂರೇ ತಿಂಗಳಲ್ಲಿ ಪೂರೈಸಿದೆ ಎಂಬ ಅಂಶವನ್ನು ಡಿಸಿಎಂ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು. ಇದೇ ವೇಳೆ ರಾಜ್ಯದಲ್ಲಿ ನಗರ ಪ್ರದೇಶದ ಬೀದಿ ವ್ಯಾಪಾರಿಗಳಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಬಗ್ಗೆ ಹರಿದೀಪ್ಸಿಂಗ್ ಪುರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜೀವನೋಪಾಯ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ ಹಾಜರಿದ್ದರು.