ಬೆಂಗಳೂರು: ವಾಣಿಜ್ಯ ಬ್ಯಾಂಕ್ಗಳಿಂದ ರೈತರು ಪಡೆದ ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲ, ಮರು ಸಾಲ ಮತ್ತು ಪ್ರೋತ್ಸಾಹ ಧನಕ್ಕೆ ಅರ್ಹತೆ ಹೊಂದಿರುವ ಸಾಲಗಳ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಎಂದು ಸಿಎಂ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ವಾಣಿಜ್ಯ ಬ್ಯಾಂಕ್ಗಳಿಗೆ ಬಿಡುಗಡೆಯಾದ ಹಣವನ್ನು ಕಡಿತಗೊಳಿಸಿ ಉಳಿದ ಬಾಕಿ ಮೊತ್ತವನ್ನು ಏಕ ಕಂತಿನಲ್ಲಿ ಪಾವತಿಸಲು ಅನುಮೋದನೆ ನೀಡಿ ಸರ್ಕಾರ ಆದೇಶ ಜಾರಿಮಾಡಿದೆ. ರಿಸ್ಟ್ರಕ್ಚರ್ಡ್ ಸಾಲಗಳ ಸಾಲ ಮನ್ನಾದಡಿ ಅರ್ಹತೆ ಹೊಂದಿದ ರೈತರ 2,812 ಕೋಟಿ, ಓವರ್ ಡ್ಯೂ ಸಾಲದಡಿ 3,057 ಕೋಟಿ, ಪ್ರೋತ್ಸಾಹ ಧನ ಸಾಲ ಮನ್ನಾ ಯೋಜನೆಯಡಿ 720 ಕೋಟಿ ಹಣದಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಹಣ ಕಡಿತಗೊಳಿಸಿ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಎನ್ಪಿಎ ಸಾಲಗಳು ಮತ್ತು ಜನವರಿ 2018 ರಿಂದ ರೈತರ ಸಾಲದ ಮೇಲಿನ ಬಡ್ಡಿ ಪಾವತಿಸುವ ಬಗ್ಗೆ ಪ್ರತ್ಯೇಕ ನಿರ್ಧಾರ ತಗೆದುಕೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಬಾಕಿಹಣವನ್ನು ಭೂಮಾಪನ ಕಂದಾಯ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರ ಖಾತೆಯಲ್ಲಿರುವ ಹಣ ಬಳಸಿಕೊಳ್ಳಲು ಸೂಚಿಸಲಾಗಿದ್ದು, ಹಣದ ಕೊರತೆ ಉಂಟಾದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ.