ಬೆಂಗಳೂರು : ಮುಖ್ಯಮಂತ್ರಿಗಳಾಗಿ ದೇವರಾಜ ಅರಸು ಅವರು ಜಾರಿಗೆ ತಂದ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಸಮ ಸಮಾಜ ನಿರ್ಮಾಣದ ಕನಸು ಹೊಂದಿದ್ದ ಮಹಾನ್ ನಾಯಕರಾಗಿದ್ದರು ಎಂದು ರಾಜ್ಯಕ್ಕೆ ಅರಸು ನೀಡಿದ್ದ ಕೊಡುಗೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದರು.
ವಿಧಾನಸೌಧದ ಪಶ್ವಿಮದ್ವಾರದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 39ನೇ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇಂದು ಸಾಮಾಜಿಕ ನ್ಯಾಯದ ಹರಿಕಾರ ನಾಡು ಕಂಡ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪುಣ್ಯಸ್ಮರಣೆ. ಜನಸಾಮಾನ್ಯರ ಬಗ್ಗೆ ಅರಸು ಅವರಿಗಿದ್ದ ಕಾಳಜಿ, ದೂರದೃಷ್ಟಿ ಆಡಳಿತ ನಿರ್ಧಾರಗಳು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಯಿತು ಎಂದ್ರು.
ಎಂಟು ವರ್ಷಗಳ ಕಾಲ ಸತತವಾಗಿ ಮುಖ್ಯಮಂತ್ರಿಯಾಗಿ ದೇಶದ ರಾಜಕೀಯಕ್ಕೆ ಮೌನಕ್ರಾಂತಿಯ ನಾಂದಿ ಹಾಡಿದ ಅರಸು, ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
ಅವರ ಕಾಲವನ್ನು ಅರಸು ವೈಭವ ಎಂದೇ ಪ್ರತಿಯೊಬ್ಬ ಕನ್ನಡಿಗನೂ ನೆನಪಿಸಿಕೊಳ್ಳುತ್ತಾನೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ, ದಲಿತರಿಗೆ ಆರ್ಥಿಕವಾಗಿ ದುರ್ಬಲರಾದವರಿಗೆ ಆಸರೆಯಾಗಿ, ಪರಿಣಾಮಕಾರಿ ನೀತಿಗಳನ್ನು ಅನುಷ್ಠಾನಕ್ಕೆ ತಂದರು.
ದುರ್ಬಲ ವರ್ಗದವರಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆ ನಿವಾರಿಸಲು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ವ್ಯಕ್ತಿ ಅರಸು. ಹಿಂದುಳಿದ ವರ್ಗದವರ ಜನಾಂಗಕ್ಕಾಗಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಮುಖಾಂತರ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಉಳುವವನೇ ಒಡೆಯ ಎನ್ನುವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಲಕ್ಷಾಂತರ ಜನರ ಬದುಕನ್ನು ಹಸನಾಗಿಸಿದರು.
ಹಾವನೂರು ವರದಿ ಮೂಲಕ ರಾಜ್ಯದ ಸಾರ್ವಜನಿಕರ ಬದುಕಿನಲ್ಲಿ ಹೊಸ ಜಾಗೃತಿಯನ್ನುಂಟು ಮಾಡಿದರು. ಹಿಂದುಳಿದ ವರ್ಗದ ನಾಯಕರಾಗಿ ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಕಾರಣ ಎಂದು ಅರಿತು, ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯಗಳನ್ನು ಸ್ಥಾಪಿಸಿದರು.
ಜೀತ ಪದ್ಧತಿ, ಮಲ ಹೊರುವ ಪದ್ಧತಿಗಳನ್ನು ನಿಷೇಧಿಸಿ, ಹಿಂದುಳಿದ ವರ್ಗದ ಜನರಿಗೆ ಆತ್ಮವಿಶ್ವಾಸ ದೊರಕಿಸಿಕೊಟ್ಟರು. ರಾಜ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ನಾಯಕನಿಗೆ ರಾಜ್ಯದ ಜನತೆ ಮತ್ತು ಸರ್ಕಾರದ ಪರವಾಗಿ ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸುವುದಾಗಿ ಸಿಎಂ ಬಿಎಸ್ವೈ ತಿಳಿಸಿದರು.