ಆನೇಕಲ್: ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಆರೋಪಕ್ಕೆ ಗುರಿಯಾಗಿರುವ ಶಿಕ್ಷಣ ಇಲಾಖೆ ನಡೆ ವಿರುದ್ಧ ತಿರುಗಿಬಿದ್ದಿರುವ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶಿಕ್ಷಣ ಸಚಿವರನ್ನು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ತಕ್ಷಣವೇ ವಜಾಗೂಳಿಸುವಂತೆ ಆನೇಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ಸಂವಿಧಾನವನ್ನು ಡಾ.ಬಿ ಆರ್ ಅಂಬೇಡ್ಕರ್ ಒಬ್ಬರೆ ರಚಿಸಿಲ್ಲ. ಬೇರೆ ಬೇರೆ ಸಮಿತಿಗಳು ಬರಿದಿದ್ದನ್ನು ಒಟ್ಟುಗೂಡಿಸಿ ಸಂವಿಧಾನದ ಅಂತಿಮ ಕರಡನ್ನು ತಯಾರಿಸಿದ್ದಾರೆ ಎಂಬದನ್ನು ಮಕ್ಕಳ ಪಠ್ಯದಲ್ಲಿ ಅಳವಡಿಸಿಲು ಹೊರಟಿದ್ದಾರೆ. ನಕಾರಾತ್ಮಕ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗು ಇಲಾಖೆಯ ಆಧೀನ ಕಾರ್ಯದರ್ಶಿ ಉಮಾಶಂಕರ್ ಕೂಡಲೇ ರಾಜೀನಾಮೆ ನೀಡಿ ಎಂದು ದಲಿತ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಅಣಕು ಶವಯಾತ್ರೆ ನಡೆಸಿದರು.
ಆನೇಕಲ್ ತಾಲೂಕಿನ ಅತ್ತಿಬೆಲೆ ಹೆದ್ದಾರಿಯ ವೃತ್ತದಿಂದ ತಮಿಳುನಾಡು ಗಡಿ ವರೆಗೆ ತಮಟೆ ವಾದನದೊಂದಿಗೆ ಸಚಿವ ಸುರೇಶ್ ಕುಮಾರ್, ಕಾರ್ಯದರ್ಶಿ ಉಮಾಶಂಕರ್ ಅಣಕು ಶವಯಾತ್ರೆ ಪ್ರತಿಭಟನಾ ಮೆರವಣಿಗೆಯಲ್ಲಿ ಜನರ ಗಮನ ಸೆಳೆಯಿತು.