ಬಾಗಲಕೋಟೆ : ಬಿಜೆಪಿ ಪಕ್ಷದಲ್ಲಿ ಇನ್ನು 15 ವರ್ಷ ಇರುತ್ತೇನೆ. ಮುಂದೆ ಮುಖ್ಯಮಂತ್ರಿ ಆಗುವುದಾಗಿ ಸಚಿವ ಉಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹದೇ ಖಾತೆ ನೀಡುವಂತೆ ಒತ್ತಾಯ ಮಾಡಿಲ್ಲ. ಮುಖ್ಯಮಂತ್ರಿಗಳು ಯಾವ ಖಾತೆ ನೀಡಿದರೂ ನಿಭಾಯಿಸಿಕೊಂಡು ಹೋಗುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಮುಂದೆ ಮತ್ತೆ ಬಿಜೆಪಿ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ ಎಂದರು.
ಶಾಸಕ ಜಮೀರ ಅಹ್ಮದ್ ಮನೆ ಮೇಲಿನ ಇಡಿ ದಾಳಿ ಬಗ್ಗೆ ಮಾತನಾಡಿ, ಅಕ್ರಮವಾಗಿ ಸಾಕಷ್ಟು ಹಣ ಸಂಗ್ರಹ ಮಾಡಿದರೆ, ಯಾವುದೇ ಪಕ್ಷ ಎಂದು ನೋಡದೆ ಇಡಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ಬಿಜೆಪಿ ಪಕ್ಷದ ಸಿದ್ದೇಶ್ವರ್ ಮೇಲೆಯೂ ದಾಳಿ ಮಾಡಲಾಗಿತ್ತು ಎಂದರು.
ಡಿಕೆಶಿಗೆ ಟಾಂಗ್ : ರಾಜಕೀಯ ಪ್ರೇರಿತ ದಾಳಿ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡುತ್ತಾ, ಡಿಕೆಶಿಗೆ ಉತ್ತರ ಕೊಡೋದು ಇವತ್ತಿನ ದಿನಮಾನದಲ್ಲಿ ಬರೋದಿಲ್ಲ. ಯಾರು ಲೆಕ್ಕ ತೋರಿಸೋದಿಲ್ಲ. ಯಾರು ಲೆಕ್ಕ ಸರಿ ಇಡೋದಿಲ್ಲ. ಅವರ ಮೇಲೆ ಐಟಿ ದಾಳಿ ಆಗುತ್ತವೆ. ಅದರಲ್ಲಿ ಜಮೀರ್ ಅಹ್ಮದ್ ಇದ್ದಾರೆ. ಪಕ್ಷದ ಆಧಾರದ ಮೇಲೆ ದಾಳಿ ಆಗಲ್ಲ. ಯಾರು ಲೆಕ್ಕವನ್ನ ತೋರಿಸಲ್ಲ, ಅವರ ಮೇಲೆ ದಾಳಿ ಆಗುತ್ತವೆ. ಅದೇನೂ ಹೊಸತಲ್ಲ ಎಂದು ಟಾಂಗ್ ನೀಡಿದರು.
ಓದಿ: ಸಚಿವ ಸ್ಥಾನ ಸಿಗದವರದು ಸ್ಮಶಾನ ವೈರಾಗ್ಯ.. ಎಲ್ಲರೂ ಬಿಟ್ಟ ಖಾತೆ ಕೊಟ್ಟರೂ ನಿಭಾಯಿಸುವೆ : ಸಚಿವ ನಿರಾಣಿ
ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ : ರಮೇಶ್ ಜಾರಕಿಹೊಳಿ ಮನೆಯಲ್ಲಿ ಅಸಮಾಧಾನಿತರ ಸಭೆ ವಿಚಾರವಾಗಿ ಮಾತನಾಡಿ, ಸಭೆ ಸೇರೋದು, ಕೂಡೋದು, ಮಾತನಾಡೋದು ನಡೀತಾವೆ. ಎಲ್ಲಾ ಶಾಸಕ ಮಿತ್ರರು ಒಬ್ಬರ ಮನೆಗೆ ಒಬ್ಬರು ಹೋಗೋದು ನಡೆಯುತ್ತದೆ. ರಾಜಕಾರಣದಲ್ಲಿದ್ದೇವೆ, ರಾಜಕೀಯ ಚರ್ಚೆ ಮಾಡ್ತೀವಿ. ಅದರಿಂದ ಯಾವುದೇ ತೊಂದರೇನೂ ಇಲ್ಲ ಎಂದರು.