ಬಾಗಲಕೋಟೆ: ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದರೆ ಸಾಕು ಖಾಸಗಿ ಶಾಲೆಗಳು ಬೇಸಿಗೆಯಲ್ಲೇ ತಮ್ಮ ಮುಂದಿನ ವರ್ಷದ ಪ್ರವೇಶಾತಿಗಾಗಿ ಎಲ್ಲಾ ತಯಾರಿ ಮಾಡಿಕೊಂಡು ಮನೆಮನೆಗೆ ಲಗ್ಗೆ ಇಡುತ್ತವೆ. ಪೈಪೋಟಿ ಕಾರಣದಿಂದ ಖಾಸಗಿ ವಲಯದಲ್ಲಿ ಶಿಕ್ಷಕರಿಗೆ ಅಂತಹ ಒತ್ತಡವೂ ಇರುತ್ತದೆ.
ಆದರೆ, ಸರ್ಕಾರಿ ವಲಯದಲ್ಲಿ ಹಾಗಲ್ಲ. ಶೈಕ್ಷಣಿಕ ವರ್ಷ ಮುಗಿದ ತಕ್ಷಣ ಎಲ್ಲ ಶಿಕ್ಷಕರು ರಜೆಯಲ್ಲಿ ಊರೂರು ಪ್ರವಾಸದಲ್ಲಿರುತ್ತಾರೆ. ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ಜೂನ್ವರೆಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ತಮ್ಮ ಸಹ ಶಿಕ್ಷಕರೊಂದಿಗೆ ಸೇರಿ ಏಪ್ರಿಲ್ ತಿಂಗಳಿಂದಲೇ ಮನೆ ಮನೆಗೆ ತೆರಳಿ ಮಕ್ಕಳ ಶಿಕ್ಷಣದ ಮಹತ್ವ, ಸರ್ಕಾರಿ ಶಾಲೆಗಳ ಔಚಿತ್ಯ, ಸಿಗುವ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡಿ ಮಕ್ಕಳ ದಾಖಲಾತಿ ಮಾಡಿಕೊಳ್ಳುವ ಕೆಲಸ ಆರಂಭಿಸಿದ್ದಾರೆ.
ಸರ್ಕಾರಿ ಶಾಲೆಗಳ ಶಿಕ್ಷಕರು ಸ್ವಪ್ರೇರಣೆಯಿಂದ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಅಲ್ಲಿನ ಶಾಲೆಯ ವಾತಾವರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆ ಯಾವುದರಲ್ಲೂ ಕಮ್ಮಿಯಿಲ್ಲ ಎಂಬುದನ್ನು ಮನವರಿಕೆ ಮಾಡುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಇಂಥ ಶಿಕ್ಷಕರ ಕಾರ್ಯ ಇತರರಿಗೆ ಮಾದರಿಯಾಗಲಿ.