ಚೆನ್ನೈ: ಸುಪ್ರೀಂಕೋರ್ಟ್ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಟಿಎನ್ಸಿಎ ಸಂಸ್ಥೆಯನ್ನು ತಮ್ಮ ಸಾರಥ್ಯದಲ್ಲಿ ಮುಂದುವರಿಸಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮಗಳನ್ನು ಅಧ್ಯಕ್ಷಗಾದಿಗೇರಿಸಲು ಅವರು ನಿರ್ಧರಿಸಿದ್ದಾರೆ.
ಟಿಎನ್ಸಿಎ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತೆ ಸಂಸ್ಥೆಯಲ್ಲಿ ಪಾರುಪತ್ಯ ಮುಂದುವರೆಸುವ ವಿಶ್ವಾಸದಲ್ಲಿದ್ದು, ಈ ಬಾರಿ ಅವರ ಪುತ್ರಿ ರೂಪ ಗುರುನಾಥ್ ಅವರನ್ನು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ನಿಲ್ಲಿಸಲು ತೀರ್ಮಾನಿಸಿದ್ದಾರೆ. ಟಿಎನ್ಸಿಎ ಕ್ಲಬ್ ಪ್ರತಿನಿಧಿಗಳು ಸಹ ರೂಪ ಗುರುನಾಥ್ಗೆ ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ಸೋಮವಾರ ರೂಪ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲು ಶ್ರೀನಿವಾಸನ್ ಬಣ ಮುಂದಾಗಿದೆ.
ಚುನಾವಣೆಯಲ್ಲಿ ರೂಪ ಗುರುನಾಥ್ಗೆ ಪ್ರತಿಸ್ಫರ್ಧಿಯಾಗಿ ಯಾವ ಬಣದಿಂದಲೂ ಪ್ರಭಾವಿಗಳು ನಿಲ್ಲುವ ಸೂಚನೆ ಇಲ್ಲದಿರುವುದರಿಂದ ಮುಂಬರುವ ಟಿಎನ್ಸಿಎ ಚುನಾವಣೆಯಲ್ಲಿ ರೂಪ ಗುರುನಾಥ್ ಅಧ್ಯರಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ರೂಪ ಟಿಎನ್ಸಿಎ ಅಧ್ಯಕ್ಷರಾದರೆ ಬಿಸಿಸಿಐ ಮಾನ್ಯತೆ ಪಡೆದ ಕ್ರಿಕೆಟ್ ಸಂಸ್ಥೆಗೆ ಆಯ್ಕೆಯಾದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರೂಪ ಪಾತ್ರರಾಗಲಿದ್ದಾರೆ.