ಹೈದರಾಬಾದ್: ಮುಂಬರುವ ಏಷ್ಯಾಕಪ್ ತಂಡದಲ್ಲಿ ಆರ್ಸಿಬಿ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವಕಾಶ ಪಡೆದುಕೊಂಡಿದ್ದು, ಈ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಅಜೇಯ್ ಜಡೇಜಾ ವಿಭಿನ್ನ ಹೇಳಿಕೆ ನೀಡಿದ್ದಾರೆ. ದಿನೇಶ್ "ಕಾರ್ತಿಕ್ ಏಷ್ಯಾಕಪ್ನಲ್ಲಿ ಆಡುವ 11 ಬಳಗದಲ್ಲಿ ಸ್ಥಾನ ಪಡೆದುಕೊಳ್ಳದಿದ್ದರೆ ನನ್ನೊಂದಿಗೆ ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತುಕೊಳ್ಳಬಹುದು" ಎಂದು ಅವರು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಏಷ್ಯಾ ಕಪ್ಗೆ 15 ಸದಸ್ಯರ ಟೀಂ ಇಂಡಿಯಾ: ಕೆ.ಎಲ್.ರಾಹುಲ್ ಉಪನಾಯಕ, ಜಸ್ಪ್ರೀತ್, ಹರ್ಷಲ್ ಔಟ್
2022ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯುತ್ತಿದ್ದ ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರ ನಿರ್ವಹಿಸಿದ್ದರು. ಜೊತೆಗೆ ಅನೇಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ನೀಡಲಾಗಿದೆ. ಇದರ ಬೆನ್ನಲ್ಲೇ ಮಾತನಾಡಿರುವ ಅಜಯ್ ಜಡೇಜಾ, ದಿನೇಶ್ ಕಾರ್ತಿಕ್ ಏಷ್ಯಾಕಪ್ನಲ್ಲಿ ಆಡುವ 11 ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವುದಿಲ್ಲ. ಹೀಗಾಗಿ, ನನ್ನೊಂದಿಗೆ ಮತ್ತೊಮ್ಮೆ ಕಾಮೆಂಟರಿ ಮಾಡುವುದೇ ಸರಿ ಎಂದು ವ್ಯಂಗ್ಯವಾಡಿದ್ದಾರೆ.
ಏಷ್ಯಾಕಪ್ನಲ್ಲಿ ಆಕ್ರಮಣಕಾರಿ ಕ್ರಿಕೆಟ್ ನೋಡಲು ಬಯಸಿದರೆ ನಿಮ್ಮ ಆಲೋಚನೆಯೂ ವಿಭಿನ್ನವಾಗಿರಬೇಕು. ಆದರೆ, ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ನೋಡಲು ನಾನು ಬಯಸುವುದಿಲ್ಲ. ಅವರು ನನ್ನ ಪಕ್ಕದ ಕಾಮೆಂಟರಿ ಸೀಟಿನಲ್ಲಿ ಕುಳಿತು ಕಾಮೆಂಟರಿ ಮಾಡುವುದೇ ಸೂಕ್ತ. ಅವರು ಉತ್ತಮ ಕಾಮೆಂಟೇಟರ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾಕಪ್ ಟೂರ್ನಿಗೋಸ್ಕರ ಆಯ್ಕೆಗೊಂಡಿರುವ ರೋಹಿತ್ ಶರ್ಮಾ ನಾಯಕತ್ವದ 15ರ ಸದಸ್ಯರ ಬಳಗದಲ್ಲಿ ದಿನೇಶ್ ಕಾರ್ತಿಕ್ ಅವಕಾಶ ಪಡೆದುಕೊಂಡಿದ್ದು, ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದರ ಬಗ್ಗೆ ಕುತೂಹಲ ಮೂಡಿದೆ.