ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಹೃದಯವಂತ ನಟ ಎಂದು ಗುರುತಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ತಮ್ಮ ಅಭಿಮಾನಿಗಳಿಗೆ ಎಂದೂ ಬೇಸರ ಮೂಡಿಸಿಲ್ಲ. ಇದೀಗ ಗಂಗಾವತಿಯ ಬಾಲಕಿಗೆ ಗಿಫ್ಟ್ ಕೊಟ್ಟು ಗಮನ ಸೆಳೆದಿದ್ದಾರೆ.
ಗಂಗಾವತಿ ಎಪಿಎಂಸಿಯ ಸದಸ್ಯ ಶರಣೇಗೌಡ ರಾರಾವಿ ಅವರ ಪುತ್ರಿ ಆರ್.ಮೇಘಾ ಅಪ್ಪುಗೆ ಅವರ ವ್ಯಕ್ತಿ ಚಿತ್ರ ಬಿಡಿಸಿ ಗಿಫ್ಟ್ ಮಾಡಿದ್ದಾರೆ. ಬಾಲಕಿ ಕೊಟ್ಟ ಚಿತ್ರವನ್ನು ಪಡೆದ ಪುನೀತ್ ಪ್ರತಿಯಾಗಿ ಆಕೆಗೆ ಪಿಆರ್ಕೆ ಸಂಸ್ಥೆಯ ಚಿಹ್ನೆ ಇರುವ ಕುಡಿಯುವ ನೀರಿನ ಬಾಟಲಿ ನೀಡಿದ್ದಾರೆ. ಹಿರಿಯ ನಟನಿಂದ ಗಿಫ್ಟ್ ಪಡೆದುಕೊಂಡಿದ್ದಕ್ಕೆ ಬಾಲಕಿ ಇದೀಗ ಫುಲ್ ಖುಷ್ ಆಗಿದ್ದಾಳೆ.
ಸದ್ಯ ಗಂಗಾವತಿ ತಾಲೂಕಿನಲ್ಲಿ ಜೇಮ್ಸ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಬಿಡುವಿನ ವೇಳೆ ಜನ ಸಂಪರ್ಕಕ್ಕೆ ಸಿಗುತ್ತಿರುವ ಪವರ್ ಸ್ಟಾರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟು ಹನುಮಂತನ ಆಶೀರ್ವಾದ ಪಡೆದಿದ್ದರು.