ಬಹಳಷ್ಟು ಜನರು ಪ್ರಶಾಂತ್ ಸಿದ್ದಿ ಅವರನ್ನು ಆಫ್ರಿಕಾ ದೇಶದ ವ್ಯಕ್ತಿ ಎಂದು ತಪ್ಪು ತಿಳಿದುಕೊಂಡಿದ್ದರು. ಆದರೆ, ಈತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೆರೆಯ ಸಿದ್ದಿ ಜನಾಂಗದ ಅಮಾಯಕ.
ನೀನಾಸಮ್ಲ್ಲಿ ರಂಗ ತರಬೇತಿ ಪಡೆದ ಈತನಿಗೆ ಕಲೆ ಸಿದ್ಧಿಸಿತು. ಯಾವಾಗ ಜಯಂತ್ ಕಾಯ್ಕಿಣಿ ಅವರು ಪ್ರಶಾಂತ್ ಸಿದ್ದಿ ಅಭಿನಯದ ‘ಸೂರ್ಯನ ಕುದುರೆ’ ನಾಟಕ ವೀಕ್ಷಿಸಿದರೋ ಅಲ್ಲಿಂದ ಈತನ ಲಕ್ಕು ಬದಲಾಯಿತು.
ಜಯಂತ್ ಕಾಯ್ಕಿಣಿ ಅವರು ಈ ಕಾಡಿನ ಪ್ರತಿಭೆಯನ್ನು ಯೋಗರಾಜ ಭಟ್ಟರಿಗೆ ಪರಿಚಯಿಸಿದರು. ಅಲ್ಲಿಂದ ‘ಪರಮಾತ್ಮ’ ಇವರ ಜೀವನದಲ್ಲಿ ದೊಡ್ಡ ಯಶಸ್ಸು ಕೊಟ್ಟನು. ಪರಮಾತ್ಮ ಚಿತ್ರದಿಂದ ಶುರುವಾದ ಈತನ ಸಿನಿ ಜರ್ನಿ, ಲೈಫು ಇಷ್ಟೇನೇ, ದ್ಯಾವ್ರೆ, ಅಣ್ಣಾ ಬಾಂಡ್, ಲೂಸಿಯಾ, ದೃಶ್ಯ, ಪ್ಲಸ್, ಕೆಂಡ ಸಂಪಿಗೆ, ಬುಲ್ಲೆಟ್ ಬಸ್ಯಾ, ರಣ ವಿಕ್ರಮ, ವಾಸ್ತು ಪ್ರಕಾರ, ಜಾಗ್ವಾರ್, ಪ್ರೇಮ ಗಿಮ ಜಾನೇ ದೊ, ಹ್ಯಾಪಿ ಬರ್ತ್ಡೇ, ಸಂತೆಯಲ್ಲಿ ನಿಂತ ಕಬೀರ, ಪ್ರಪಂಚ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಸೋಜಿಗ, ಜಾನ್ ಜಾನಿ ಜನಾರ್ಧನ್, ಬ್ಯೂಟಿಫುಲ್ ಮನಸುಗಳು.. ಹೀಗೆ ಒಂದ್ರ ಹಿಂದೆ ಒಂದು ಸಾಲು ಸಾಲು ಸಿನಿಮಾಗಳು ಇವರಿಗೆ ಖ್ಯಾತಿಯ ಮೆಟ್ಟಿಲಿಗೆ ತಂದು ನಿಲ್ಲಿಸಿದವು.
ಹಾಸ್ಯ ಪಾತ್ರಗಳಿಂದ ಪ್ರಸಿದ್ಧಿಯಾದ ಪ್ರಶಾಂತ್ ಈಗ ಒಂದು ಸೀರಿಯಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ‘ಪಂಟ್ರು’. ಇಂದು ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಅನಾವರಣ ಆಗುತ್ತಿದೆ. ಶೀರ್ಷಿಕೆ ಕೆಳಗೆ ‘ನಮ್ಗೆ ನಾವೇ’ ಅಂತ ಹೇಳಲಾಗಿದೆ. ಧನು ಆರ್ ಈ ಚಿತ್ರದ ನಿರ್ದೇಶಕರು.