ತುಮಕೂರು: ನಗರಕ್ಕೆ ಸುಲಭವಾಗಿ ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರ ಪ್ರವೇಶ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಎಲ್ಲಾ ಚೆಕ್ ಪೋಸ್ಟ್ಗಳ ಬಳಿ ನಿರಂತರವಾಗಿ ಪ್ಯಾಟ್ರೋಲಿಂಗ್ ಮಾಡುತ್ತಿದ್ದಾರೆ.
ತುಮಕೂರು ನಗರದ ಹೊರವಲಯದಲ್ಲಿ ಹಾದು ಹೋಗಿರುವ ಬೆಂಗಳೂರು ಮತ್ತು ಮುಂಬೈ ನಡುವಿನ ರಾಷ್ಟ್ರೀಯ ಹೆದ್ದಾರಿ 48 ಮೂಲಕ ಹೊರ ಜಿಲ್ಲೆಯಿಂದ ಜನರು ನಿರಂತರವಾಗಿ ಬರುತ್ತಿದ್ದರು. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿರುವ ಜಿಲ್ಲಾ ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯಲ್ಲಿ ಇರುವ ನಗರ ಪ್ರದೇಶದ ಜನರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಹೊರ ಜಿಲ್ಲೆಯಿಂದ ಬರುತ್ತಿರುವ ಸೋಂಕಿತರನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ಈಗಾಗಲೇ ತಿಳಿಸಲಾಗಿದೆ.
ಅಲ್ಲದೇ ರಾಷ್ಟ್ರೀಯ ಹೆದ್ದಾರಿ 48ರ ಮತ್ತೊಂದು ಭಾಗದಲ್ಲಿ ಇರುವಂತಹ ತುಮಕೂರು ನಗರದ ಸಾರ್ವಜನಿಕರಿಗೆ ನಗರವನ್ನು ಪ್ರವೇಶಿಸಲು ಶಿರಾ ಗೇಟ್ ಚೆಕ್ ಪೋಸ್ಟ್ ಮೂಲಕ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ರೀತಿಯ ಸರ್ವೀಸ್ ರಸ್ತೆ ಮೂಲಕ ತುಮಕೂರು ನಗರಕ್ಕೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ.