ತುಮಕೂರು: ಪದೇ ಪದೆ ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ವತಿಯಿಂದ ಉಪ ತಹಶೀಲ್ದಾರ್ ಕೀರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು ತಾಲೂಕಿನ ಸಿಬಿ ದೇವಾಲಯ ಸಮೀಪದ ಕೆಂಪದಾಳಹಳ್ಳಿ ಗ್ರಾಮದ ರೈತರು ಮಳೆ ಬಂದ ಕಾರಣ ಕೃಷಿ ಚಟುವಟಿಕೆ ನಡೆಸಲು ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆ ಗಾರ್ಡ್ ಏಕಾಏಕಿ ಬಂದು ಜಮೀನಿನಲ್ಲಿದ್ದ ಶೆಡ್ ಒಡೆದು ಹಾಕಿದ್ದಾರೆ. ಅಲ್ಲದೆ ಮಹಿಳೆಯರನ್ನ ಎಳೆದಾಡಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಹೊಲದಲ್ಲಿ ಬೆಳೆಯಲಾಗಿದ್ದ ಫಸಲು ನಾಶ ಮಾಡಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಲ್ಲೆಗೊಳಗಾದ ರೈತ ನರಸಿಂಹರಾಜು ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಈ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೆಲ ದಿನಗಳ ಹಿಂದೆ ವ್ಯವಸಾಯ ಮಾಡಬೇಕಾದರೆ ಅರಣ್ಯಾಧಿಕಾರಿ ಏಕಾಏಕಿ ಬಂದು ನನ್ನ ಪತ್ನಿಯ ಕೈ ಹಿಡಿದು ಎಳೆದಾಡಿದ್ದಾರೆ. ಅವರಿಂದ ಬಿಡಿಸಿಕೊಳ್ಳಲು ನಾವು ಮುಂದಾದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಕೋಪಗೊಂಡು ನನ್ನ ಕೈ ಕಚ್ಚಿದ್ದಾರೆ ಎಂದು ಆರೋಪಿಸಿದರು.