ಶಿವಮೊಗ್ಗ: ಇತ್ತಿಚೇಗೆ ಸ್ವಚ್ಛಗೊಳಿಸಲಾದ ಸಾಗರ ಪಟ್ಟಣದ ಮಧ್ಯ ಭಾಗದಲ್ಲಿ ಇರುವ ಗಣಪತಿ ಕೆರೆಯಲ್ಲಿ ಅಪರೂಪದ ನೀರುನಾಯಿಗಳು ಪತ್ತೆಯಾಗಿವೆ.
ಅವಾಸನದ ಅಂಚಿನಲ್ಲಿರುವ ನೀರುನಾಯಿಗಳು ದೊಡ್ಡ ಮೀನುಗಳನ್ನು ತಿಂದು ಜೀವಿಸುತ್ತವೆ. ಆಹಾರ ಬೇಕೆಂದು ಎನಿಸಿದಾಗ ನೀರಿಗಿಳಿದು ಬೇಟೆಯಾಡುತ್ತವೆ. ನಂತರ ನದಿ, ಕೆರೆ ಮಧ್ಯದಲ್ಲಿ ಇರುವ ಬಂಡೆಗಳ ಮೇಲೆ ವಾಸ ಮಾಡುತ್ತವೆ. ನೀರಿನಲ್ಲಿ ವೇಗವಾಗಿ ಹೋಗುವ ಸಾಮರ್ಥ್ಯ ಹೊಂದಿರುವ ನೀರುನಾಯಿ, ನೆಲದ ಮೇಲೆ ನಿಧಾನವಾಗಿ ಚಲಿಸುತ್ತವೆ.
ವಿದೇಶಗಳಲ್ಲಿ ಇವುಗಳ ಚರ್ಮಕ್ಕೆ ವಿಪರೀತ ಬೇಡಿಕೆ ಇದೆ. ಭಾರತದಲ್ಲಿ ಹೆಚ್ಚಾಗಿ ಹರಿಯುವ ನೀರಿನ ಭಾಗದಲ್ಲಿ ವಾಸ ಮಾಡುತ್ತವೆ. ಶಿವಮೊಗ್ಗದ ತುಂಗಾ ನದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇವು ಕಂಡು ಬಂದಿದ್ದವು. ಇವುಗಳು ನದಿಯಲ್ಲಿ ಆಹಾರದ ಕೊರತೆಯಿಂದಾಗಿ ನದಿ ಪಾತ್ರದ ಪಕ್ಕದ ಕೆರೆಗಳಿಗೆ ವಲಸೆ ಬಂದಿವೆ.
ಸಾಕು ಮೀನುಗಳನ್ನು ತಿನ್ನಲು ಕೆರೆಯತ್ತ ವಲಸೆ ಬರುತ್ತಿವೆ. ಅಲ್ಲದೆ ನದಿ ಹಾಗೂ ಕೆರೆಯಲ್ಲಿ ಹಾಕಿದ ಬಲೆಗೆ ಬಿದ್ದ ಮೀನುಗಳನ್ನು ಇವು ತಿನ್ನುತ್ತವೆ ಎಂದು ಮೀನುಗಾರರು ನೀರುನಾಯಿಯನ್ನು ಕೊಲ್ಲುತ್ತಾರೆ. ಇವುಗಳ ರಕ್ಷಣೆ ಮಾಡುವ ಅನಿವಾರ್ಯತೆಯು ಸಹ ಇದೆ. ಇದರಿಂದ ಈ ಕುರಿತು ಜಾಗೃತಿ ಆಗಬೇಕಿದೆ ಎನ್ನುತ್ತಾರೆ ಪ್ರಾಣಿಪ್ರಿಯರಾದ ನಾಗರಾಜ್.
ಸಾಗರದ ಗಣಪತಿ ಕೆರೆಯನ್ನು ಗುತ್ತಿಗೆ ಪಡೆದು ಮೀನು ಸಾಕಿರುವ ಭೈರಪ್ಪನವರು, ಇವು ವರದಾ ನದಿಯಿಂದ ಈ ಕೆರೆಗೆ ಬಂದಿರಬಹುದು. ಅದಷ್ಟು ಬೇಗ ನೀರುನಾಯಿಗಳನ್ನು ಹಿಡಿದು ನದಿಗೆ ಬಿಡುವಂತೆ ವಿನಂತಿಸಿಕೊಂಡಿದ್ದಾರೆ.