ಮಂಗಳೂರು: ನಾಗೇಶ ಅಣ್ವೇಕರ ಸೇರಿದಂತೆ 6 ಮಂದಿಗೆ 2021ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಪ್ರಕಟಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರ ಕೊಂಕಣಿ ಗೌರವ ಪ್ರಶಸ್ತಿ ವಿಭಾಗದ ಕೊಂಕಣಿ ಸಾಹಿತ್ಯದಲ್ಲಿ ನಾಗೇಶ ಅಣ್ವೇಕರ, ಕೊಂಕಣಿ ಕಲೆ ವಿಭಾಗದಲ್ಲಿ ದಿನೇಶ್ ಪ್ರಭು ಕಲ್ಲೊಟ್ಟೆ, ಕೊಂಕಣಿ ಜಾನಪದ ವಿಭಾಗದಲ್ಲಿ ಮಾಧವ ಖಾರ್ವಿ, ಪುಸ್ತಕ ಪುರಸ್ಕಾರ ವಿಭಾಗದ ಕೊಂಕಣಿ ಕವನದಲ್ಲಿ ಫಾ.ಜೆ.ವಿ.ಸಿಕ್ವೇರಾ, ಕೊಂಕಣಿ ಸಣ್ಣಕಥೆಗಳಲ್ಲಿ ಎಚ್.ಎಂ. ಪೆರ್ನಾಲ್, ಕೊಂಕಣಿ ಲೇಖನದಲ್ಲಿ ಗೋಪಾಲಕೃಷ್ಣ ಪೈ ಎಂಬುವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 27ರಂದು ಕುಮಟಾದ ಮಹಾಲಸ ನಾರಾಯಣಿ ದೇವಸ್ಥಾನದಲ್ಲಿ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.