ಬೆಂಗಳೂರು : ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಕರ್ನಾಟಕದ ಜತೆಗಿನ ನಂಟು ಇಂದು ನಿನ್ನೆಯದಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಹಿರಿಯ ಕಾಂಗ್ರೆಸ್ ನಾಯಕರಾಗಿಯೂ ಮಹತ್ವದ ಅನುಭವ ಹೊಂದಿದ್ದಾರೆ. ರಾಜ್ಯದ ಜೊತೆಗಿನ ಇವರ ಬಹುವರ್ಷದ ನಂಟಿನ ಛಾಯಾಚಿತ್ರವನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಕರ್ನಾಟಕದ ಜೊತೆ ಪ್ರಣಬ್ ಮುಖರ್ಜಿ ಹೊಂದಿದ್ದ ನಂಟನ್ನು ಇದು ಅನಾವರಣಗೊಳಿಸಿದೆ.
ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿದ ವೀರಪ್ಪ ಮೊಯ್ಲಿ, ಎನ್ ಧರಂಸಿಂಗ್, ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರ ಅವಧಿಯಲ್ಲಿ ಪ್ರಣಬ್ ಮುಖರ್ಜಿ ಹಲವು ಸಾರಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದರು.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರೊಂದಿಗೆ ರಾಜ್ಯ ಪ್ರವಾಸ ಸಂದರ್ಭದಲ್ಲಿ ಭಾಗವಹಿಸಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿ ಜೊತೆಗೂ ಕರ್ನಾಟಕದಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು.
ಪ್ರಣಬ್ ಮುಖರ್ಜಿ ನಿಧನರಾದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಇವರ ನೆನಪಿನ ಚಿತ್ರಣವನ್ನು ಬಿಚ್ಚಿಟ್ಟಿದ್ದು, ಇದರಲ್ಲಿ ಅತ್ಯಂತ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ನಿಧನರಾದ ಸಂದರ್ಭ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಚಿತ್ರ ಹಾಗೂ ವಿಧಾನಸೌಧದಲ್ಲಿ ಇವರು ಹಲವು ವರ್ಷಗಳ ಹಿಂದೆ ಭೇಟಿ ನೀಡಿದ್ದ ಚಿತ್ರ ಗಮನಸೆಳೆಯುತ್ತದೆ. ಕಪ್ಪು-ಬಿಳುಪು ಚಿತ್ರಗಳು ಇವರ ಭೇಟಿಯ ಇತಿಹಾಸವನ್ನು ವಿವರಿಸುತ್ತವೆ.
ಮಾಜಿ ಮುಖ್ಯಮಂತ್ರಿ ದಿ.ಎನ್ ಧರಂಸಿಂಗ್ ಜೊತೆ ಇವರ ಒಡನಾಟ ಎಷ್ಟೊಂದು ಆಪ್ತವಾಗಿತ್ತು ಎನ್ನುವುದು ಹಲವು ಚಿತ್ರಗಳಲ್ಲಿ ಕಾಣಸಿಕ್ಕಿದೆ. ಇದಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಜೊತೆ ಕಳೆದ ಆತ್ಮೀಯ ಕ್ಷಣದ ಚಿತ್ರ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ಚಿತ್ರಗಳು ಕೂಡ ಗಮನಸೆಳೆಯುತ್ತವೆ.
ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ.ವೀರಪ್ಪ ಮೊಯ್ಲಿ ಹಾಗೂ ಸಿದ್ದರಾಮಯ್ಯ ಜೊತೆ ಕಳೆದ ಸುಂದರ ಕ್ಷಣಗಳ ಚಿತ್ರ ಗಮನಸೆಳೆಯುತ್ತದೆ. ಅಲ್ಲದೆ, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಭೇಟಿಕೊಟ್ಟ ಸಂದರ್ಭ ರಾಜ್ಯಪಾಲ ವಜುಭಾಯಿ ವಾಲಾ ಜೊತೆ ಸಮಾಲೋಚಿಸುತ್ತಿರುವ ಚಿತ್ರ ಕೂಡ ಗಮನ ಸೆಳೆಯುತ್ತದೆ.
ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದ ಚಿತ್ರವೊಂದರಲ್ಲಿ ಕೇಂದ್ರ ಸಚಿವರಾಗಿದ್ದ ದಿ. ಅನಂತ್ ಕುಮಾರ್ ಕೂಡ ಕಾಣಸಿಗುತ್ತಾರೆ. ರಾಜ್ಯದ ಜೊತೆಗಿನ ಪ್ರಣಬ್ ಮುಖರ್ಜಿ ನಂಟು ಹಲವು ನಾಯಕರ ಜೊತೆಗಿನ ಒಡನಾಟದ ಚಿತ್ರಗಳು ಇವರ ಭೇಟಿಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ.