ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ನಲ್ಲಿ ಮಲ್ಲೇಶ್ವರಂನ ನಿರಂತರಂ ಹಾಗೂ ಸಂಗೀತ ಸಂಭ್ರಮ ಟ್ರಸ್ಟ್ ಆಯೋಜಿಸಿರುವ ಶ್ರೀರಾಮ ಯಾನ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ನಾಗಾಭರಣ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ, ಹಿರಿಯ ರಂಗಕರ್ಮಿ ನಾಗಾಭರಣ ಮಾತನಾಡಿ, ಮನುಷ್ಯನ ಮೂಲ ವ್ಯವಸ್ಥೆಯಲ್ಲಿ ಅವನ ಅಳಿವು - ಉಳಿವು ಇರೋದು ನಮ್ಮ ಪರಿಸರದಲ್ಲಿ. ನಾವು ಉಳಿಬೇಕು ಅಂದ್ರೆ ಸಸ್ಯಸಂಕುಲ ಉಳಿಯಬೇಕು. ಸಸ್ಯ ಸಂಕುಲ ಉಳಿಯಬೇಕು ಅಂದ್ರೆ ನಾವು ಹೆಚ್ಚು ಗಿಡಗಳನ್ನ ನೆಡಬೇಕು. ನಮ್ಮ ಭಾರತೀಯ ಸಂಸ್ಕೃತಿದಲ್ಲಿ ಗಿಡಮರಗಳನ್ನ ದೇವರೆಂದು ಪೂಜಿಸುತ್ತೇವೆ. ಈ ಪದ್ಧತಿ ಬಂದಿದ್ದು, ನಮ್ಮ ರಾಮಾಯಣ ಹಾಗೂ ಮಹಾಭಾರತದಿಂದ. ರಾಮಾಯಣದಲ್ಲಿ ಬರುವಂತಹ ಅಶೋಕವನವನ್ನ ನಿರ್ಮಿಸಿದ ಹಾಗೆ ಶ್ರೀರಾಮ ಯಾನ ನಡಿಗೆಯಲ್ಲಿ ಗಿಡಗಳನ್ನ ನಡಲಾಗುತ್ತಿದೆ. ಇದೊಂದು ಒಳ್ಳೆಯ ಕಾರ್ಯ. ಈ ಶಾಲಾ ಆವರಣ ಅಶೋಕ, ಶಬರಿವನವಾಗಲಿ ಅಂತ ಆಶಿಸುತ್ತೇನೆ ಎಂದರು.
ನಿವೃತ್ತ ವಿಜ್ಞಾನಿ ಡಾ.ಸದಾನಂದ ಹೆಗಡೆ ಮಾತನಾಡಿ, ರಾಮಾಯಣ ಮಹಾಭಾರತದಲ್ಲಿ ಉಲ್ಲೇಖವಾಗಿರುವ ಎಂಟು ವಿಧದ ಗಿಡಗಳನ್ನ ನೆಡಲಾಗಿದೆ. ಕದಂಬ, ಸೀತಾ, ಅಶೋಕ ಮುಂತಾದ ಗಿಡಗಳನ್ನ ನೆಡಲಾಗಿದೆ. ಇವು ನಮ್ಮ ದೇಶದ ಅಮೂಲ್ಯ ಗಿಡಗಳು. ಆದರೆ,ಬೆಂಗಳೂರಿನಲ್ಲಿ ಕೇವಲ ಫಾರೀನ್ ಮಾದರಿಯ ಗಿಡಗಳನ್ನೇ ನೆಡಲಾಗಿದೆ ಎಂದರು.
ಸಂಗೀತ ಸಂಭ್ರಮ ಟ್ರಸ್ಟ್ನ ಅಧ್ಯಕ್ಷೆ ವೀಣಾ ಮೂರ್ತಿ ಮಾತನಾಡಿ, ಜಾನಪದ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ. ರಾಮಾಯಣದ ಕಥೆಯನ್ನ ತಿಳಿಸಲು ಉತ್ತಮವಾದ ನೃತ್ಯ ಸಂಯೋಜನೆಗಳನ್ನ ಮಾಡಲಾಗಿದೆ ಎಂದರು.