ಆನೇಕಲ್: ನಕ್ಸಲರಾಗಿದ್ದ ಇಬ್ಬರು ಕಾಡಿಂದ ನಾಡಿಗೆ ಮರಳಿ ದೇಶಾದ್ಯಂತ ಓಡಾಡಿ ಎಲ್ಲ ಬಡವರಿಗೆ ಭೂ ಮಂಜೂರು ಅತ್ಯಗತ್ಯ ಎಂದು ಸರ್ಕಾರದ ಕಣ್ಣು ತೆರೆಸಿದ್ದರು. ಅದರಂತೆ ಅಂದಿನ ಸಿಎಂ ಸಿದ್ದರಾಮಯ್ಯ ಸಮಿತಿಯೊಂದನ್ನು ರಚಿಸಿ, ಬಡವರಿಗೆ ಎರಡು ಎಕರೆ ಭೂ ಮಂಜೂರಾತಿಗೆ ಆದೇಶ ಹೊರಡಿಸಿದ್ದರು. ಆದ್ರೆ ಆದೇಶ ಇನ್ನೂ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆ.ಎಸ್.ದೊರೆಸ್ವಾಮಿ ತಿಳಿಸಿದರು.
ಆನೇಕಲ್ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 70 ವರ್ಷ ಕಳೆದರೂ ರಾಜ್ಯದಲ್ಲಿ ಬಡವ ಬಡವನಾಗಿಯೇ ಉಳಿದಿದ್ದಾನೆ. ಯಾವ ಪಕ್ಷವೂ ಬಡವನ ಪರ ನಿಲ್ಲುತ್ತಿಲ್ಲ, ಮೋದಿ ಆರು ಸಾವಿರ ಘೋಷಿಸಿದ್ದೇ ಬಂತು ಯಾವಾಗ ಕೊಡ್ತಾರೋ ಗೊತ್ತಿಲ್ಲ. ವೋಟಿಗಾಗಿ ಇಂತಹ ಯೋಜನೆಗಳನ್ನು ತರುತ್ತಾರೆ. ಇದರ ಬದಲಾಗಿ ದುಡಿಯುವ ಕೈಗಳಿಗೆ ಕೆಲಸ ಕೊಡಿ, ಅವರೇ ದೇಶಕ್ಕೆ ಕುಟುಂಬಕ್ಕೆ ಸ್ವಾಭಿಮಾನಿಗಳಾಗುತ್ತಾರೆ. ಬಡವರಿಗೆ ಜಮೀನು ಮಂಜೂರು ಮಾಡದಿದ್ದರೆ ಸರ್ಕಾರ ರಚಿಸಿರುವ ಸಮಿತಿಗೆ ರಾಜೀನಾಮೆ ನೀಡುವುದಾಗಿ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭೂ ಮಂಜೂರಾತಿಗೆ ಒಬ್ಬರ ಮೇಲೊಬ್ಬರು ಬೆರಳು ತೋರಿಸಿ ಜಾರಿಕೊಳ್ಳುತ್ತಿದ್ದಾರೆ. ಎಂದು ಹಿರಿಯ ಹೋರಾಟಗಾರರಾದ ಸಿ.ತೋಪಯ್ಯ ಅವರು ಕಿಡಿಕಾರಿದರು. ಧರಣಿಯಲ್ಲಿ ಸಿರಿಮನೆ ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.