ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಪಾದಚಾರಿ ಹಾಗೂ ಸೈಕಲ್ ಸವಾರರ ಸುರಕ್ಷತೆ, ಸುಲಭ ಸಂಚಾರ ಮತ್ತು ಸೈಕ್ಲಿಂಗ್ ಜಾಲವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಕ್ರಿಯಾತ್ಮಕ ಸಂಚಾರ ಮಸೂದೆ ಕರ್ನಾಟಕ-2021 (ACTIVE MOBILITY BILL-2021) ಕರಡನ್ನು ಸರ್ಕಾರ ಸಿದ್ಧಪಡಿಸಿದೆ.
ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯವನ್ನು ಕೋರಿದೆ. ನಗರ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಹಾಗೂ ವಾಯು ಮಾಲಿನ್ಯವನ್ನು ಹದಗೆಡಿಸುತ್ತಿದೆ. ಇದರಿಂದ ಅವಘಡಗಳು ಹೆಚ್ಚಾಗುತ್ತಿದೆ. ಸೈಕಲ್ ಸವಾರರು ಹಾಗೂ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ಸೈಕಲ್ ಸಂಚಾರ ಹಾಗೂ ಪಾದಚಾರಿ ಸ್ನೇಹಿ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕರಡು ವಿಧೇಯಕವನ್ನು ಪ್ರಕಟಿಸಲಾಗಿದೆ.
ಪ್ರಸ್ತುತ ಇರುವ ಕಾನೂನು ಪಾದಚಾರಿಗಳು ಹಾಗೂ ಸೈಕಲ್ ಸವಾರರ ಪರವಾಗಿಲ್ಲ. ಅವರ ಹಕ್ಕನ್ನು ರಕ್ಷಿಸುವ ನಿಯಮಗಳು ಕಾನೂನಿನಲ್ಲಿ ಇಲ್ಲ. ರಸ್ತೆ ಬಳಸುವ ಎಲ್ಲರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆಗಳು ಹಾಗೂ ಸಾರ್ವಜನಿಕ ಜಾಗಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಕರಡು ವಿಧೇಯಕವನ್ನು ರೂಪಿಸಲಾಗಿದೆ.
ಕರಡು ವಿಧೇಯಕದಲ್ಲಿನ ಪ್ರಮುಖ ಅಂಶಗಳೇನು?:
- ಸ್ಥಳೀಯ ಸಂಸ್ಥೆಗಳು ಕಾಯ್ದೆ ಜಾರಿಗೆ ಬಂದ ಎರಡು ವರ್ಷದೊಳಗೆ ಸಮಗ್ರ ಸಂಚಾರ ಯೋಜನೆ ರೂಪಿಸಬೇಕು.
- ಇದರಲ್ಲಿ ಪಾದಚಾರಿ ಹಾಗೂ ಸೈಕ್ಲಿಂಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು
- ಪ್ರಸಕ್ತ ರಸ್ತೆ ಜಾಲಕ್ಕೆ ಹೊಸ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಪರ್ಕಿಸಬೇಕು.
- ಪಾದಚಾರಿ ಮಾರ್ಗ ಹಾಗೂ ಸೈಕಲ್ ಪಥಕ್ಕೆ ಹೆಚ್ಚಿನ ಸ್ಥಳವನ್ನು ನಿಗದಿಗೊಳಿಸಬೇಕು
- ಎಲ್ಲಾ ನಗರ ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಬೇಕು.
- ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಸೈಕಲ್ ಪಥವನ್ನು ಅಭಿವೃದ್ಧಿ ಪಡಿಸಬೇಕು.
- ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಬೈಕ್ ಶೇರಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು.
- ವಾಹನ ಸವಾರರು ಪಾದಚಾರಿ ಮಾರ್ಗ ಹಾಗೂ ಸೈಕಲ್ ಪಥ ಬಳಸುವುದಕ್ಕೆ ನಿಷೇಧ.
- ಪಾದಚಾರಿ ಮಾರ್ಗ ಹಾಗೂ ಸೈಕಲ್ ಪಥದಲ್ಲಿ ತಾತ್ಕಾಲಿಕ ಹಾಗೂ ಖಾಯಂ ನಿರ್ಮಾಣಗಳನ್ನು ಮಾಡುವಂತಿಲ್ಲ.
- ಕಾಯ್ದೆ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಒಂದು ಲಕ್ಷ ರೂ. ವರೆಗೆ ದಂಡ
- ಕಾಯ್ದೆ ಉಲ್ಲಂಘನೆ ಪುನರಾವರ್ತಿಸಿದರೆ 2 ಲಕ್ಷ ರೂ. ವರೆಗೆ ದಂಡ
ಇದನ್ನೂ ಓದಿ: ನಗದು ರಹಿತವಾಗಿ ವಿದ್ಯಾರ್ಥಿ ವೇತನ ಪಾವತಿಗೆ ರಾಜ್ಯ ಸರ್ಕಾರದ ಡಿಜಿಟಲ್ ಪ್ಲಾನ್