ಚಿಕ್ಕೋಡಿ: ಕರ್ನಾಟಕದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರೇ ಹೇಳಿದ್ದಾರೆ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಸೇತುವೆ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ. ಅದು ತಾನಾಗಿ ನಡೆದರೆ ಆಪರೇಷನ್ ಕಮಲ ಆಗುವುದಿಲ್ಲ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದೇವೆ. ಸರ್ಕಾರ ಬಿದ್ದು ಹೋದರೆ ರಾಜ್ಯದಲ್ಲಿ ನಾವು ಹೊಸ ಸರ್ಕಾರ ಮಾಡೇ ಮಾಡುತ್ತೇವೆ ಎಂದರು.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ಸಿಎಂ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನಾಚಿಕೆ, ಬುದ್ಧಿ ಇಲ್ಲ. ಸಿಎಂ ಸರ್ಕಾರ ನಡೆಸಿದರೆ ನಾವೇನು ಮಾಡಬೇಕು? ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು. ಇದೇ ವೇಳೆ ಯಡಿಯೂರಪ್ಪನವರು ಯಾವಾಗ ಸಿಎಂ ಆಗೋರು ಎಂಬ ಪ್ರಶ್ನೆಗೆ, ಇನ್ನೊಂದು 25 ವರ್ಷದಲ್ಲಿ ಎಂದು ಹೇಳಿದರು.