ಅಥಣಿ: ಪ್ರವಾಹಕ್ಕೆ ಸಿಲುಕಿ ಜೀವಹಾನಿ ಆದಂತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಣ ನೀಡಬೇಕೆಂಬ ರಾಜ್ಯ ಸರ್ಕಾರದ ಆದೇಶವಿದ್ದರೂ ಅಥಣಿ ತಾಲೂಕು ಆಡಳಿತ ಮಾತ್ರ ಪರಿಹಾರ ಧನ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿ ಮುಂದೆ ನೆರೆಸಂತ್ರಸ್ತರು ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರು.
ಕೃಷ್ಣಾ ನದಿ ಪ್ರವಾಹ ಬಂದು 80 ದಿನಗಳೇ ಕಳೆದರೂ ಪರಿಹಾರ ವಿತರಣೆಯಲ್ಲಿ ತಾರತಮ್ಯವನ್ನು ಖಂಡಿಸಿ 'ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ' ಎಂಬ ವೇದವಾಕ್ಯದೊಂದಿಗೆ ದರೂರ ಗ್ರಾಮದ ಸೇತುವೆಯಿಂದ ತಹಶೀಲ್ದಾರ್ ಕಚೇರಿವರೆಗೆ ನೆರೆ ಸಂತ್ರಸ್ತರು ಬೃಹತ್ ಪಾದಯಾತ್ರೆ ಕೈಗೊಂಡಿದ್ದರು.
ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ತೀರ್ಥ ಗ್ರಾಮದ ಬಾಲಕ ಬಸವರಾಜ ಮಾನಿಕ ಕಾಂಬಳೆ ಕುಟುಂಬಕ್ಕೆ ಇನ್ನೂ ಪರಿಹಾರ ಧನ ಸಿಕ್ಕಿಲ್ಲ. ಈ ಬಡ ಕುಟುಂಬಕ್ಕೆ ತಾಂತ್ರಿಕ ನೆಪಗಳನ್ನೊಡ್ಡಿ ಪರಿಹಾರ ವಿತರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಈ ಕೂಡಲೇ 5 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಬಡವರು ಪಡೆದಿರುವ ಸಾಲ ವಸೂಲಾತಿಗಾಗಿ ಕಂಪನಿಗಳ ಪ್ರತಿನಿಧಿಗಳು ದಿನನಿತ್ಯ ಕಿರುಕುಳ ನೀಡುತ್ತಿದ್ದು, ಮೈಕ್ರೋ ಫೈನಾನ್ಸ್ ಕಂಪನಿಗಳ ಎಲ್ಲ ಸಾಲಗಳು ಮನ್ನಾ ಆಗಬೇಕು ಹಾಗೂ ಕಾನೂನು ಬಾಹಿರ ಸಾಲ ವಸೂಲಾತಿಗೆ ಬರುವ ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.