ಮುಂಬೈ: ಸೌದಿ ಅರೇಬಿಯಾ ಬಹಳ ವರ್ಷಗಳ ಬಳಿಕ ಕಚ್ಚಾ ತೈಲ ದರ ಏರಿಕೆ ಮಾಡಿದ್ದು, ಇಂಧನದ ಬಿಕ್ಕಟ್ಟು ಹಣದುಬ್ಬರ ಮತ್ತು ಹಣಕಾಸಿನ ಚಟುವಟಿಕೆಗಳ ಮೇಲೆ ಸೀಮಿತ ಪರಿಣಾಮ ಬೀರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಕಳೆದ ವಾರ ಸೌದಿ ಅರೇಬಿಯಾದ ಅರಾಮ್ಕೋ ತೈಲ ಘಟಕಗಳ ಮೇಲೆ ಡ್ರೋನ್ ದಾಳಿಯಿಂದ ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಏಕಾಏಕಿ ಜಿಗಿತಗೊಂಡಿತ್ತು. ಭಾರತ ಸಹಿತ ಹಲವು ರಾಷ್ಟ್ರಗಳಿಗೆ ತೈಲ ಕೊರತೆ ಆತಂಕ ಕಾಡಿದ್ದು, ಒಂದೇ ದಿನದಲ್ಲಿ ತೈಲ ದರ ಶೇ 20ರಷ್ಟು ಹೆಚ್ಚಳವಾಗಿತ್ತು. ಇದು ದೇಶಿಯ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿದ್ದಲ್ಲದೇ ರೂಪಾಯಿ ಕುಸಿತಕ್ಕೂ ಕಾರಣವಾಗಿತ್ತು. ದೀರ್ಘಕಾಲದ ಪೂರೈಕೆಗೆ ಅಡ್ಡಿಯಾಗಿ ದೇಶಿ ಆರ್ಥಿಕತೆಗೆ ಸಮಸ್ಯೆಗಳು ತಂದೊಡ್ಡಲಿದೆ ಎಂಬ ಆತಂಕಕ್ಕೆ ಉತ್ತರವಾಗಿ ಗವರ್ನರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಬ್ಲೂಮ್ಬರ್ಗ್ ಇಂಡಿಯಾ ಆರ್ಥಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸೌದಿ ಬಿಕ್ಕಟ್ಟು ಹಣದುಬ್ಬರದ ಮೇಲೆ ಸೀಮಿತ ಪರಿಣಾಮ ಬೀರಲಿದೆ. ಹಣಕಾಸಿನ ಚಟುವಟಿಕೆಗಳಿಗೆ ಕಡಿಮೆ ಸಬ್ಸಿಡಿ ನೀಡಲಾಗುತ್ತದೆ. ಡ್ರೋನ್ ದಾಳಿಯ ಪರಿಣಾಮದಿಂದ ಸೌದಿ ತೈಲ ಘಟಕಗಳು ಶೀಘ್ರವೇ ಹೊರ ಬರಲಿವೆ ಎಂದರು.