ವಿಜಯಪುರ: ವಿಶ್ವ ಸೈಕಲ್ ದಿನಾಚರಣೆ ನಿಮಿತ್ತ ವಿಜಯಪುರ ಸೈಕ್ಲಿಂಗ್ ಗ್ರೂಪ್ ಕೊರೊನಾ ವಿರುದ್ಧ ಜಾಗೃತಿ ಸೈಕಲ್ ಜಾಥಾ ನಡೆಸಿತು.
ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಸೈಕಲ್ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಚಾಲನೆ ನೀಡಿ, ಸ್ವತಃ ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ತುಳಿದರು.
ಬಳಿಕ ಮಾತನಾಡಿದ ಅವರು, ಸೈಕಲ್ ದೇಹದ ಆರೋಗ್ಯಕ್ಕೆ ಅತ್ಯುತ್ತಮ ಸಾಧನ. ಕೊರೊನಾ ಕಾಯಿಲೆ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಲು ಇದು ಉತ್ತಮ ವಿಧಾನವಾಗಿದೆ. ಮುಂದಿನ ತಿಂಗಳಿನಿಂದ ನಾನು ಪ್ರತಿ ವಾರ ಕನಿಷ್ಠ 3-4 ದಿನ ಸೈಕ್ಲಿಂಗ್ ಗ್ರೂಪ್ ಸದಸ್ಯರೊಂದಿಗೆ ಸೈಕಲ್ ತುಳಿಯುವುದಕ್ಕೆ ಬರುವುದಾಗಿ ತಿಳಿಸಿದರು.
ಸೈಕಲ್ ದಿನಾಚರಣೆಗೆ ಚಾಲನೆ ನೀಡಿದ ಸುನೀಲಗೌಡ: ವಿಶ್ವ ಸೈಕಲ್ ದಿನವನ್ನ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ಈ ವೇಳೆ, ಮಾತನಾಡಿದ ಅವರು, ಸೈಕಲ್ ಬಳಸುವುದರಿಂದ ಹಲವಾರು ಲಾಭಗಳಿದ್ದು, ನಾನು ಕೂಡ ಕಳೆದ ಅನೇಕ ದಿನಗಳಿಂದ ಸೈಕಲ್ ತುಳಿಯುತ್ತಿದ್ದು, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹರ್ಷಗೌಡ ಎಸ್.ಪಾಟೀಲ, ಸಿದ್ಧಸಿರಿ ನಿರ್ದೇಶಕ, ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ, ಡಾ.ಮಹಾಂತೇಶ ಬಿರಾದಾರ, ಪ್ರೇಮಾನಂದ ಬಿರಾದಾರ, ಶಾಂತೇಶ ಕಳಸಗೊಂಡ, ಸೋಮು ಮಠ, ಗುರುಶಾಂತ ಕಾಪಸೆ, ಡಿ.ಕೆ.ತಾವಸೆ, ಮಹಾಂತೇಶ ಬಿಜ್ಜರಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.