ಹೈದರಾಬಾದ್ : ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಳನ್ನು ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಕೆಲವು ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರ ಆಕ್ಷೇಪಣೆಗಳ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಯುತ್ತಿತ್ತು. 2019ರ ಜೂನ್ನಲ್ಲಿ ಬಾಂಬೆ ಹೈಕೋರ್ಟ್ ಕೋಟಾ ಪರವಾಗಿ ತೀರ್ಪು ನೀಡಿತ್ತು ಮತ್ತು ಗಾಯಕವಾಡ್ ಆಯೋಗ ಶಿಫಾರಸು ಮಾಡಿದಂತೆ ಉದ್ಯೋಗದಲ್ಲಿ ಶೇ.13ರಷ್ಟು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.12 ರಷ್ಟಕ್ಕೆ ಮೀಸಲಾತಿ ಕಡಿಮೆ ಮಾಡುವಂತೆ ಸೂಚಿಸಿತ್ತು.
ವಿಚಾರಣೆಯ ಸಮಯದಲ್ಲಿ “ಎಷ್ಟು ತಲೆಮಾರುಗಳವರೆಗೆ ಮೀಸಲಾತಿಯನ್ನು ಮುಂದುವರಿಸುತ್ತೀರಿ?” ಎಂದು ಸುಪ್ರೀಂಕೋರ್ಟ್ ಕೇಳಿದೆ. ತನ್ನ ಅಂತಿಮ ತೀರ್ಪಿನಲ್ಲಿ, ಸಮಾನತೆಯ ಸಿದ್ಧಾಂತಕ್ಕೆ ಮರಾಠ ಮೀಸಲಾತಿಯು ವಿರುದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಮರಾಠರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಗುರುತಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿಲ್ಲ ಎಂಬ ಪ್ರತಿವಾದಿಯ ಅಭಿಪ್ರಾಯವನ್ನು ಈ ಮೂಲಕ ಸುಪ್ರೀಂಕೋರ್ಟ್ ಸಮ್ಮತಿಸಿದಂತಾಗಿದೆ.
ಆರ್ಥಿಕವಾಗಿ ಹಿಂದುಳಿದ ವಲಯಗಳಿಗೆ ಒದಗಿಸಿದ 10 ಶೇಕಡಾ ಮೀಸಲಾತಿ ಮತ್ತು ಮರಾಠರಿಗೆ ಮಹಾರಾಷ್ಟ್ರ ಪ್ರಕಟಿಸಿದ ಕೋಟಾದ ವ್ಯತ್ಯಾಸವನ್ನು ಕೋರ್ಟ್ ವಿಷದವಾಗಿ ವಿವರಿಸಿದೆ. ಇದೇ ವೇಳೆ, ಮೀಸಲಾತಿಯನ್ನು ಶೇ. 50ಕ್ಕೆ ನಿಗದಿ ಮಾಡಿರುವ 1992ರ ಇಂದಿರಾ ಸಾವ್ನೆ ತೀರ್ಪನ್ನು ಹೆಚ್ಚು ನ್ಯಾಯಾಧೀಶರಿರುವ ಪೀಠಕ್ಕೆ ವರ್ಗಾವಣೆ ಮಾಡುವ ಅಗತ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
ಈ ಮೂಲಕ, ಕೋರ್ಟ್ ಹಲವು ವಿಷಯಗಳಲ್ಲಿ ಸ್ಪಷ್ಟತೆ ನೀಡಿದೆ. ಮರಾಠರಿಗೆ 50 ಶೇಕಡಾ ಮೀಸಲಾತಿಯ ಮಿತಿಯನ್ನು ಮೀರುವ ಯಾವುದೇ ಸನ್ನಿವೇಶವನ್ನು ಗಾಯಕ್ವಾಡ್ ಆಯೋಗವಾಗಲೀ, ಹೈಕೋರ್ಟ್ ಆಗಲೀ ಸೃಷ್ಟಿ ಮಾಡಿಲ್ಲ ಎಂದು ಹೇಳುವ ಮೂಲಕ ಇಡೀ ದೇಶದ ಮೇಲೆ ಪರಿಣಾಮ ಬೀರಬಹುದಾದ ಮಹತ್ವದ ತೀರ್ಪನ್ನು ನೀಡಿದಂತಾಗಿದೆ.
ತಲೆಮಾರುಗಳಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ತಾತ್ಕಾಲಿಕ ಬೆಂಬಲವನ್ನು ನೀಡುವುದಕ್ಕಾಗಿ ಸಂವಿಧಾನದಲ್ಲಿ ಮೀಸಲಾತಿಯನ್ನು ಪ್ರಸ್ತಾಪಿಸಲಾಗಿತ್ತು. ಈ ಮೂಲಕ ಹಿಂದುಳಿದ ಸಮುದಾಯಗಳನ್ನು ಸಬಲಗೊಳಿಸಲು ಸಂವಿಧಾನದಲ್ಲಿ ಅವಕಾಶ ಒದಗಿಸಲಾಗಿತ್ತು.
ಕೆಲವೇ ವಲಯಗಳಿಗೆ ಉದ್ಯೋಗ ಮತ್ತು ಶಿಕ್ಷಣ ಅವಕಾಶಗಳಲ್ಲಿ ಶೇ. 70 ರಷ್ಟು ಮೀಸಲಿಡುವುದಕ್ಕಿಂತ ದೊಡ್ಡ ಅಧಿಕಾರ ದುರ್ಬಳಕೆ ಇಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆದರೆ, ವಾಸ್ತವದಲ್ಲಿ ಅವರ ಸಲಹೆಯ ಜಾರಿಯಾಗುತ್ತಿದೆಯೇ? ಹಲವು ಸಂದರ್ಭಗಳಲ್ಲಿ, ಒಟ್ಟು ಮೀಸಲಾತಿ ಶೇ. 50 ಕ್ಕಿಂತ ಹೆಚ್ಚಿರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ಪ್ರಬಲ ಸಾಮಾಜಿಕ ಸಮೂಹಗಳು ಮೀಸಲಾತಿಗೆ ಬೇಡಿಕೆ ಇಟ್ಟಾಗಲೆಲ್ಲ ಕೋಟಾ ರಾಜಕೀಯ ಮುನ್ನೆಲೆಗೆ ಬರುತ್ತಿದೆ.
ಎಲ್ಲ ಕಾನೂನು ಆಕ್ಷೇಪಣೆಗಳು ಮತ್ತು ಅಡ್ಡಿಗಳನ್ನು ಮೀರಿಯೂ, ತಮಿಳುನಾಡು ಶೇ. 69 ರಷ್ಟು ಮೀಸಲಾತಿ ನೀಡುತ್ತಿದೆ. ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣವೂ ಇದೇ ನೀತಿಯನ್ನು ಅನುಸರಿಸುತ್ತಿವೆ. ಮೇಘಾಲಯುವು ಇತ್ತೀಚೆಗಷ್ಟೇ, ಶೇ. 85.9 ರಷ್ಟು ಜನರು ಬುಡಕಟ್ಟು ಸಮುದಾಯದವರು ಎಂದು ಹೇಳುವ ಮೂಲಕ ಶೇ. 50 ಕ್ಕಿಂತ ಹೆಚ್ಚು ಮೀಸಲಾತಿ ನೀಡುವ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಗರಿಷ್ಠ ಮಿತಿಯಲ್ಲಿ ಬದಲಾವಣೆ ಮಾಡದಿರುವ ತನ್ನ ನಿಲುವಿಗೆ ಬದ್ಧವಾಗಿರುವ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು, ರಾಜ್ಯ ಸರ್ಕಾರಕ್ಕೆ “ಹಿಂದುಳಿದ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಮೀಸಲಾತಿ ಒಂದೇ ವಿಧಾನವೇ?” ಎಂದು ನೇರವಾಗಿ ಪ್ರಶ್ನಿಸಿದೆ. ಈ ನಿಟ್ಟಿನಲ್ಲಿ, ಕೋರ್ಟ್ ಹಲವು ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಹಿಂದುಳಿದ ವರ್ಗಗಳ ಪಟ್ಟಿಗೆ ಸರ್ಕಾರಗಳು ಹಲವು ಜಾತಿಗಳನ್ನು ಸೇರಿಸಿದ್ದರೂ, ಆ ಜಾತಿಗಳು ಸಬಲೀಕರಣಕ್ಕೆ ಅಷ್ಟೇನೂ ಪ್ರಾಮುಖ್ಯತೆ ನೀಡಲಿಲ್ಲ. ಈ ಜಾತಿಗಳ ಸಬಲೀಕರಣಕ್ಕೆ ಯಾವ ಸ್ಕೀಮ್ಗಳನ್ನೂ ಸರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.
ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆಯ ವೇಳೆ, ನಿರ್ದಿಷ್ಟ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಅಗತ್ಯವನ್ನು ಕೋರ್ಟ್ ಪರೋಕ್ಷವಾಗಿ ಪ್ರಸ್ತಾಪಿಸಿದೆ. ಈ ಯೋಚನೆಯನ್ನು ರಾಜ್ಯ ಸರ್ಕಾರಗಳು ಜಾರಿಗೆ ತರುವುದಕ್ಕೆ ಸೂಕ್ತವಾಗಿವೆ. ಜಾತಿ ಮತ್ತು ಮತ ಯಾವುದೇ ಇದ್ದರೂ ಸಮಾಜ ಮತ್ತು ಶೈಕ್ಷಣಿಕ ನೆಲೆಯಲ್ಲಿ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವನ್ನು ಜನರು ಹೊಂದಿದ್ದಾಗ ಮಾತ್ರವೇ ದೇಶಕ್ಕೆ ಮೀಸಲಾತಿಯಿಂದ ಅನುಕೂಲವಾಗುತ್ತದೆ.